ಕಾಂಟ್ರಾಕ್ಟರ್ ಬಳಿ ಲಂಚ ಪಡೆಯುತ್ತಿದ್ದ ಗ್ರಾ.ಪಂ ಸದಸ್ಯ, ಪಿಡಿಓ ಎಸಿಬಿ ಬಲೆಗೆ

ರಾಮನಗರ: ಕಾಂಟ್ರಾಕ್ಟರ್ ಬಳಿ ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಪಿಡಿಓ ಎಸಿಬಿ ಬಲೆಗೆ ಬಿದ್ದ ಘಟನೆ ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮ ಪಂಚಾಯತ್‍ನಲ್ಲಿ ನಡೆದಿದೆ.

ಮುದುಗೆರೆ ಗ್ರಾಮ ಪಂಚಾಯತ್‍ನ ಪಿಡಿಓ ಮಂಜುಳಾ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಮಹೇಶ್ ಎಸಿಬಿ ಬಲೆಗೆ ಬಿದ್ದವರು. ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಮದ ನಿವಾಸಿಯೊಬ್ಬರು ಮುದುಗೆರೆ ಗ್ರಾಮ ಪಂಚಾಯತಿಯಿಂದ ನರೇಗಾ ಯೋಜನೆಯ ಪೈಪ್‍ಲೈನ್ ಕಾಮಗಾರಿ ಗುತ್ತಿಗೆ ಪಡೆದು ಕಾಮಗಾರಿ ಮುಗಿಸಿದ್ದರು. ಆದರೆ ಅವರಿಗೆ ಕಾಮಗಾರಿಯ 65 ಸಾವಿರ ಬಿಲ್ ಹಣವನ್ನ ಮಂಜೂರು ಮಾಡಲು ಶೇ.17ರಷ್ಟು ಕಮಿಷನ್ ನೀಡುವಂತೆ ಗ್ರಾಮ ಪಂಚಾಯತಿ ಸದಸ್ಯ ಮಹೇಶ್ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಪಿಡಿಓ ಬಳಿ ಪ್ರಶ್ನಿಸಿದರೆ ಮಹೇಶ್ ಹೇಳಿದಂತೆ ಮಾಡು. ಕಮಿಷನ್ ಕೊಟ್ಟು ಬಿಲ್ ಮಂಜೂರು ಮಾಡಿಕೊಳ್ಳುವಂತೆ ತಿಳಿಸಿದ್ದರು. ಹೀಗಾಗಿ ಗುತ್ತಿಗೆದಾರ ರಾಮನಗರ ಎಸಿಬಿ ಅಧಿಕಾರಿಗಳಿಗೆ ಸಲ್ಲಿಸಿದ್ದ.

ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪಿಡಿಓ ಮಂಜುಳಾ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ಮಂಗಳವಾರ ಲಂಚವಾಗಿ 11 ಸಾವಿರ ರೂಪಾಯಿ ಪಡೆಯುತ್ತಿದ್ದರು. ಈ ವೇಳೆ ಎಸಿಬಿ ಡಿವೈಎಸ್‍ಪಿ ಮಲ್ಲೇಶ್ ನೇತೃತ್ವದ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ. ಈ ಘಟನೆ ಸಂಬಂಧ ಎಸಿಬಿ ಅಧಿಕಾರಿಗಳು ಇಬ್ಬರನ್ನೂ ವಿಚಾರಣೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *