ಸಿಲಿಕಾನ್ ಸಿಟಿಯಲ್ಲಿ ಗುಲಾಬಿ ಪ್ರತಿಭಟನೆ- ಬೆಂಗಳೂರು ಕಂಗಾಲು

ಬೆಂಗಳೂರು: ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಕೆ ಆರ್ ಸರ್ಕಲ್ ಮಾರ್ಗವಾಗಿ ತೆರಳುವವರಿಗೆ ಟ್ರಾಫಿಕ್ ಬಿಸಿ ಇಂದು ಕೊಂಚ ಜೋರಾಗಿಯೇ ತಟ್ಟಿದೆ. ಇಂದು ಎಲ್ಲೆಲ್ಲೂ ಗುಲಾಬಿ ರಂಗಿನ ಸೀರೆ ಧರಿಸಿ ಬಂದ ಆಶಾ ಕಾರ್ಯಕರ್ತೆಯರೇ ಕಾಣಿಸಿಕೊಂಡರು.

ಮಾಸಿಕ ವೇತನ 12 ಸಾವಿರ ರೂಪಾಯಿಗೆ ಆಗ್ರಹಿಸಿ ಹಾಗೂ ಹದಿನೈದು ತಿಂಗಳಿಂದ ಪ್ರೋತ್ಸಾಹ ಧನ ಬಾಕಿ ಬಿಡುಗಡೆಗೆ ಆಗ್ರಹಿಸಿ ರಾಜ್ಯಾದ್ಯಂತ ಇಂದು ಆಶಾ ಕಾರ್ಯಕರ್ತೆಯರು ಬೀದಿಗಿಳಿದಿದ್ದಾರೆ. ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಕಾಲ್ನಡಿಗೆಯಲ್ಲಿಯೇ ಆಗಮಿಸಿದರು. ಸುಮಾರು ಹತ್ತು ಸಾವಿರ ಜನ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಬೆಂಗಳೂರು ಟ್ರಾಫಿಕ್ ಜಾಮ್ ಗೆ ಸಿಲುಕಿ ಹೈರಾಣಾಯ್ತು.

ನೃಪತುಂಗ ರೋಡ್, ಆನಂದ್ ರಾವ್ ಸರ್ಕಲ್, ಶೇಷಾದ್ರಿಪುರಂ ರಸ್ತೆ, ಅರಮನೆ ಮೈದಾನದ ಮುಂಭಾಗದ ರಸ್ತೆ, ಕೆ.ಆರ್.ಸರ್ಕಲ್ ನಲ್ಲಿ ವಾಹನ ಸವಾರರು ಭರ್ತಿ ಎರಡು ಮೂರು ಗಂಟೆಗಳ ಕಾಲ ಟ್ರಾಫಿಕ್ ನಲ್ಲಿ ಸಿಲುಕಿಕೊಂಡರು. ಇನ್ನು ಅಂಬುಲೆನ್ಸ್ ಕೂಡ ಪರದಾಟ ಪಡುವಂತಾಯ್ತು.

ಆಶಾ ಕಾರ್ಯಕರ್ತೆಯರು ಆಹೋರಾತ್ರಿ ಧರಣಿಗೆ ನಿರ್ಧರಿಸಿದ್ದು, ಇಡೀ ಬೆಂಗಳೂರು ಟ್ರಾಫಿಕ್ ಬಿಸಿ ಅನುಭವಿಸಿದ್ರೂ ಸರ್ಕಾರ ಮಾತ್ರ ತಲೆಕೆಡಿಸಿಕೊಳ್ಳದೇ ಕನಿಷ್ಠ ಅಹವಾಲನ್ನು ಸ್ವೀಕರಿಸಲು ಕೂಡ ಪ್ರತಿಭಟನಾ ಸ್ಥಳಕ್ಕೆ ಬರಲಿಲ್ಲ. ರಾತ್ರಿ ಹಾಗೂ ನಾಳೆ ಬೆಳಗ್ಗೆ ಫ್ರೀಡಂ ಪಾರ್ಕ್ ಮುಂಭಾಗದ ರಸ್ತೆಯಲ್ಲಿ ಆಶಾ ಕಾರ್ಯಕರ್ತೆಯರು ವಾಸ್ತವ್ಯ ಮಾಡೋದರಿಂದ ಇನ್ನಷ್ಟು ಟ್ರಾಫಿಕ್ ಬಿಸಿ ವಾಹನ ಸವಾರರಿಗೆ ತಟ್ಟಲಿದೆ.

Comments

Leave a Reply

Your email address will not be published. Required fields are marked *