ಹೊಸ ವರ್ಷಾಚರಣೆ ನಂತರ ಆಗ್ತಿದ್ದ ಸಾವು, ನೋವು ತಡೆಯುವಲ್ಲಿ ಪೊಲೀಸರು ಯಶಸ್ವಿ

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ನಂತರ ಆಗುತ್ತಿದ್ದ ಅಪಘಾತ ಹಾಗೂ ಸಾವು, ನೋವು ತಡೆಯುವಲ್ಲಿ ಸಂಚಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವರ್ಷದ ಆರಂಭದಲ್ಲಿ ಪಾನಮತ್ತರು ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತದಲ್ಲಿ ಸಾವಿಗೆ ಇಡಾಗುತ್ತಿದ್ದರು. ಇದನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ನಡೆಸಿದ್ದರು. ಇದರಿಂದಾಗಿ ಯಾವುದೇ ಸಾವು, ನೋವಿನ ಪ್ರಕರಣಗಳು ದಾಖಲಾಗಿಲ್ಲ. ಈ ಮೂಲಕ ಅಪಘಾತದಲ್ಲಿ ಸಾವಿಗೀಡಾಗಿರುವವರ ಸಂಖ್ಯೆಯನ್ನು ಸೊನ್ನೆಗೆ ತಂದು ನಿಲ್ಲಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ.

ಕಳೆದ ವರ್ಷ ಕುಡಿದು ವಾಹನ ಚಾಲನೆ ಮಾಡಿ ವರ್ಷದ ಆರಂಭದಲ್ಲೇ ಹಲವು ಸಾವು ನೋವು ಪ್ರಕರಣಗಳು ದಾಖಲಾಗಿದ್ದವು. ಇವುಗಳನ್ನು ತಡೆಯುವ ಉದ್ದೇಶದಿಂದ ಕನ್ನಡದ ಸ್ಟಾರ್ ನಟ ಯಶ್ ಅವರಿಂದ ಅರಿವು ಮೂಡಿಸುವ ಕೆಲಸವನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಡಿದ್ದರು. ಈ ಉಪಾಯದಿಂದಾಗಿ ಸಾವು, ನೋವು ಪ್ರಕರಣಗಳು ದಾಖಲಾಗಿಲ್ಲ. ಮಾತ್ರವಲ್ಲದೆ ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳೂ ಗಣನಿಯವಾಗಿ ಕಡಿಮೆಯಾಗಿವೆ.

ಕಳೆದ ಬಾರಿಗಿಂತ ಈ ಬಾರಿ ನಾಲ್ಕು ಪಟ್ಟು ಕಡಿಮೆ ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ದಾಖಲಾಗಿವೆ. ಹೊಸ ವರ್ಷದ ಒಂದೇ ರಾತ್ರಿ ಪ್ರತಿವರ್ಷ ಸಾವಿರಕ್ಕೂ ಹೆಚ್ಚು ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಈ ಬಾರಿ ರಾತ್ರಿ ಇಡೀ ಕೇವಲ 426 ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ದಾಖಲಾಗಿವೆ. ಈ ಸಿಹಿ ವಿಷಯ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ನೆಮ್ಮದಿ ತಂದಿದೆ.

Comments

Leave a Reply

Your email address will not be published. Required fields are marked *