ಹುಡುಗೀರಿಗೆ ಚುಡಾಯಿಸಿದ್ರೆ ಒನಕೆ ಓಬವ್ವ ಬರ್ತಾಳೆ: ಎಸ್‍ಪಿ ನಿಶಾ ಜೇಮ್ಸ್ ಖಡಕ್ ವಾರ್ನಿಂಗ್

ಉಡುಪಿ: 2020ಯನ್ನು ಬರಮಾಡಿಕೊಳ್ಳಲು ಎಲ್ಲೆಡೆ ಸಿದ್ಧತೆ ನಡೆಯುತ್ತಿದೆ. ಉಡುಪಿ ಜಿಲ್ಲೆ ಮಣಿಪಾಲದಲ್ಲಿ ಸ್ಪೆಷಲ್ ಅರೇಂಜ್ಮೆಂಟ್ ಮಾಡಲಾಗಿದೆ. ಈ ನಡುವೆ ಉಡುಪಿ ಎಸ್ ಪಿ ನಿಶಾ ಜೇಮ್ಸ್ ಕುಡುಕರಿಗೆ ಮತ್ತು ಪೋಕರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಇವತ್ತು ಸಂಜೆಯಾಗುತ್ತಲೇ ಹೊಸ ವರ್ಷದ ಕಿಚ್ಚು ಹಚ್ಕೊಳುತ್ತೆ. ಕುಡಿದ ಮತ್ತಲ್ಲಿ ಮಣಿಪಾಲದ ಮಾಡರ್ನ್ ಯುವತಿಯರನ್ನು ಕೆಲ ಪೋಕರಿಗಳು ಚುಡಾಯಿಸಲು ಶುರುಮಾಡ್ತಾರೆ. ಹಾಗೇನಾದ್ರು ಯಾರಾದರೂ ಚುಡಾಯಿಸಿದ್ರೊ ಅವರ ಕಥೆ ಕ್ಲೋಸ್. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್‍ಪಿ ನಿಶಾ ಜೇಮ್ಸ್, ಮಣಿಪಾಲದಲ್ಲಿ ರಾಣಿ ಅಬ್ಬಕ್ಕ ಪಡೆಯನ್ನು ನಿಯೋಜಿಸಿದ್ದು, ಗಸ್ತು ತಿರುಗಲಿದ್ದಾರೆ. ಯಾರಾದ್ರೂ ಕಾನೂನು ಮೀರಿದ್ರೆ ಶಿಕ್ಷೆ ಅನುಭವಿಸಬೇಕಾಗುತ್ತೆ ಎಂದು ಹೇಳಿದ್ದಾರೆ.

ಹೊಸ ವರ್ಷದ ನೆಪದಲ್ಲಿ ಯಾರಾದರೂ ಬಾಲ ಬಿಚ್ಚೋಕೆ ಟ್ರೈ ಮಾಡಿದರೆ ನಿಮ್ನ ಚಚ್ಚೋಕೆ ಲೇಡಿ ಪೊಲೀಸರು ರೆಡಿಯಾಗಿದ್ದಾರೆ. ಖಾಸಗಿ ಹೋಟೆಲ್, ಪಬ್‍ನಲ್ಲಿ ಕಾರ್ಯಕ್ರಮ ಸಂದರ್ಭ ಖಾಸಗಿ ಸೆಕ್ಯೂರಿಟಿ ನೇಮಿಸಬೇಕು. 12.30 ರೊಳಗೆ ಎಲ್ಲಾ ಸಂಭ್ರಮಾಚರಣೆಗಳು ಮುಗಿಸಬೇಕು ಎಂದು ತಿಳಿಸಿದ್ದಾರೆ.

ಕೇರಳ ಮತ್ತು ಹೊರ ಜಿಲ್ಲೆಯ ಯುವಕರು ಮೋಜು ಮಸ್ತಿಗೆ ಉಡುಪಿ ಮಣಿಪಾಲ ಬರುವುದರ ಮೇಲೆ ಪೊಲೀಸರು ಹದ್ದಿನಕಣ್ಣಿಟ್ಟಿದ್ದಾರೆ. ಸ್ಪೆಷಲ್ ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದು ಸಿಸಿಟಿವಿ ಅಳವಡಿಸಲಾಗಿದೆ. ಹೊರ ರಾಜ್ಯ ಜಿಲ್ಲೆಯ ವಾಹನಗಳ ಮೇಲೆ ಗಸ್ತು ಪೊಲೀಸರು ನಿಗಾ ವಹಿಸಿದ್ದು, ಕೇಸ್ ದಾಖಲಿಸೋಕೆ ರೆಡಿಯಾಗಿದ್ದಾರೆ.

ಪೇಜಾವರಶ್ರೀ ನಿಧನದಿಂದ ಸರ್ಕಾರಿ ಕಾರ್ಯಕ್ರಮಗಳು ರದ್ದಾಗಿದ್ದು, ಮಲ್ಪೆಯ ಬೀಚ್ ಫೆಸ್ಟಿವಲ್ ಕೂಡಾ ರದ್ದು ಮಾಡಲಾಗಿದೆ. ಕುಡಿದು ವಾಹನ ಚಲಾಯಿಸೋರಿಗೆ ಫೈನ್ ಜೊತೆ ಕೇಸ್ ಹಾಕೋದಕ್ಕೆ ಪೊಲೀಸರು ದಂಡದ ಪುಸ್ತಕ ಕೈಗೆತ್ತಿಕೊಂಡಿದ್ದು, ಕುಡಿತದ ಅಭ್ಯಾಸ ಇರದ ಚಾಲಕನನ್ನು ಜೊತೆಗೆ ಕರೆದುಕೊಂಡು ಹೋಗಿ ಎಂದು ಎಸ್‍ಪಿ. ನಿಶಾ ಜೇಮ್ಸ್ ಸಲಹೆ ಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *