ಸಚಿವ ಸ್ಥಾನಕ್ಕಾಗಿ ಉಮೇಶ್ ಕತ್ತಿ ಕಸರತ್ತು

ಬೆಂಗಳೂರು: ನಾನು ಸಿಎಂ ಆಗಲು ಅರ್ಹತೆ ಇರುವ ವ್ಯಕ್ತಿ. ಸಚಿವ ಸ್ಥಾನಕ್ಕೆ ನಾನು ಲಾಬಿ ಮಾಡುತ್ತಿಲ್ಲ ಎಂದು ಹೇಳುತ್ತಲೇ ಬೆಳಗಾವಿ ಶಾಸಕ ಉಮೇಶ್ ಕತ್ತಿ ಸಚಿವ ಸ್ಥಾನಕ್ಕಾಗಿ ಪದೇ ಪದೇ ಲಾಬಿ ಮಾಡುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

ಮಂತ್ರಿ ಸ್ಥಾನಕ್ಕಾಗಿ ಯಡಿಯೂರಪ್ಪ ಮನೆಗೆ ಸುತ್ತಾಡುತ್ತಿದ್ದಾರೆ. ಇಂದೂ ಕೂಡಾ ಉಮೇಶ್ ಕತ್ತಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ. ಸಿಎಂ ಜೊತೆ ವಾಕಿಂಗ್ ತೆರಳಿ ಮನೆಗೆ ಬಂದು ಅವರ ಜೊತೆಯಲ್ಲೇ ಬೆಳಗ್ಗಿನ ಉಪಹಾರ ಸೇವಿಸಿ ಸಚಿವ ಸ್ಥಾನಕ್ಕೆ ಲಾಬಿ ಮಾಡಿದ್ದಾರೆ.

ಉಮೇಶ್ ಕತ್ತಿ ಬೆಂಗಳೂರಿಗೆ ಬಂದಾಗಲೆಲ್ಲ ಸಿಎಂ ಅವರನ್ನು ಭೇಟಿ ಮಾಡುತ್ತಲೇ ಇರುತ್ತಾರೆ. ಈ ಬಾರಿ ಶತಾಯಗತಾಯ ಮಂತ್ರಿ ಆಗಲೇಬೇಕು ಎಂದು ಕತ್ತಿ ಓಡಾಡುತ್ತಿದ್ದಾರೆ.

ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದೇ ಉಮೇಶ್ ಕತ್ತಿ ಈಗಾಗಲೇ ಸಿಎಂ ಸೇರಿದಂತೆ ಪಕ್ಷದ ವರಿಷ್ಠರ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಕೋಪ ಮಾಡಿಕೊಂಡಿರುವ ಕತ್ತಿಯನ್ನು ಸಿಎಂ ಸಮಾಧಾನ ಮಾಡಿದ್ದಾರೆ. ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ನೀಡುವ ಭರವಸೆಯನ್ನು ಸಿಎಂ ಕೂಡಾ ನೀಡಿದ್ದಾರೆ.

ಬಿಜೆಪಿ ಶಾಸಕರ ಪೈಕಿ ಉಮೇಶ್ ಕತ್ತಿ ಅತ್ಯಂತ ಹಿರಿಯ ಶಾಸಕರು. ಸಹಜವಾಗಿಯೇ ಸಚಿವ ಸ್ಥಾನ ಸಿಗಬೇಕಾಗಿತ್ತು. ಆದರೆ ಹೈಕಮಾಂಡ್ ಆದೇಶದಿಂದ ಈವರೆಗೂ ಕತ್ತಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡಲು ಸಿಎಂಗೂ ಮನಸ್ಸಿದೆ. ಆದರೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಬೇಕು. ಎರಡನೇ ಹಂತದ ಸಂಪುಟ ವಿಸ್ತರಣೆ ಸಂಕ್ರಾಂತಿ ಬಳಿಕ ಆಗಲಿದೆ. ಹೈಕಮಾಂಡ್ ಒಪ್ಪಿದ್ರೆ ಈ ಸಂಕ್ರಾಂತಿ ಉಮೇಶ್ ಕತ್ತಿಗೆ ಶುಭ ತರುವುದಂತು ಸತ್ಯ.

Comments

Leave a Reply

Your email address will not be published. Required fields are marked *