ಜಿ.ಪಂ ಸದಸ್ಯೆ ಪೊಲೀಸರ ವಶಕ್ಕೆ – ಆನಂದಪುರ ಆಹಾರ ಘಟಕದ ಮುಂದೆ ಹೈಡ್ರಾಮಾ

ಶಿವಮೊಗ್ಗ: ಪೌಷ್ಟಿಕ ಆಹಾರ ಘಟಕ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ನಡೆದಿದೆ.

ಆನಂದಪುರದಲ್ಲಿ ಸಾಗರ ಮತ್ತು ಸೊರಬ ತಾಲೂಕಿನ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಘಟಕವಿದೆ. ಇದನ್ನು ಸಾಗರಕ್ಕೆ ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದೆ. ಈ ಘಟಕದ ಸ್ಥಳಾಂತರ ವಿರೋಧಿಸಿ ಜಿ.ಪಂ. ಸದಸ್ಯೆ ಅನಿತಾಕುಮಾರಿ ಘಟಕದ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ಆರೋಪಿಸಿ ಪೊಲೀಸರು ಜಿ.ಪಂ. ಸದಸ್ಯೆ ಅನಿತಾಕುಮಾರಿ ಮತ್ತು ಆನಂದಪುರ ಗ್ರಾ.ಪಂ ಸದಸ್ಯ ಸಿರಿಜಾನ್ ಅವರನ್ನು ವಶಕ್ಕೆ ಪಡೆದರು.

ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಘಟಕದ ಏಕಾಏಕಿ ಸ್ಥಳಾಂತರ ಕುರಿತು ಈ ಹಿಂದೆ ಜಿಲ್ಲಾ ಪಂಚಾಯಿತಿ ಸಭೆಯಲ್ಲು ಚರ್ಚೆ ನಡೆದಿತ್ತು. ಆದರೆ ಅಧಿಕಾರಿಗಳು ಇಂದು ಪೊಲೀಸ್ ರಕ್ಷಣೆಯಲ್ಲಿ ದಿಢೀರ್ ಸ್ಥಳಾಂತರ ಕಾರ್ಯ ಆರಂಭಿಸಿದ್ದರು. ಆದರೆ ಘಟಕದಲ್ಲಿದ್ದ 400 ಟನ್ ಅಕ್ಕಿ, ಗೋಧಿಗೆ ಲೆಕ್ಕವೇ ಇಲ್ಲ. ಈ ಕುರಿತು ತನಿಖೆ ನಡೆಸಬೇಕು ಅಲ್ಲಿಯವರಗೂ ಯಾವುದೇ ಕಾರಣಕ್ಕೂ ಘಟಕ ಸ್ಥಳಾಂತರ ಮಾಡದಂತೆ ಜಿ.ಪಂ.ಸದಸ್ಯೆ ಅನಿತಾಕುಮಾರಿ ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *