ಬಸ್ ಗುದ್ದಿದ ರಭಸಕ್ಕೆ ಬೈಕಿನಲ್ಲಿದ್ದವರು ಮೂರು ದಿಕ್ಕಿಗೆ ಚೆಲ್ಲಾಪಿಲ್ಲಿಯಾದ್ರು

ಚಿಕ್ಕಬಳ್ಳಾಪುರ: ಖಾಸಗಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರದ ಹಿಂದೂಪುರ ಪಟ್ಟಣದಲ್ಲಿ ನಡೆದಿದೆ.

ಬೆಂಗಳೂರಿನಿಂದ ಆಂಧ್ರದ ಪೆನುಕೊಂಡಗೆ ತೆರಳುತ್ತಿದ್ದ ಭಾರತಿ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದೆ. ಅಂದಹಾಗೆ ಪೆಟ್ರೋಲ್ ಬಂಕ್‍ನಿಂದ ಏಕಾಏಕಿ ರಸ್ತೆಗೆ ಬೈಕ್ ಸವಾರ ಬಂದಿದ್ದು, ಈ ವೇಳೆ ಅತಿ ವೇಗದಿಂದ ಬರುತ್ತಿದ್ದ ಖಾಸಗಿ ಬಸ್ ಬೈಕಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ಸವಾರರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಬಸ್ ರಸ್ತೆ ಬದಿಯ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ಅಪಘಾತದಲ್ಲಿ ಬೈಕಿನಲ್ಲಿ ಇದ್ದ ಮೂವರಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡು ಹಿಂದೂಪುರ ಆಸ್ಪತ್ರೆ ಸೇರಿದ್ದಾರೆ.

ಅಪಘಾತವಾದ ಬೈಕ್ ಕರ್ನಾಟಕ ರಾಜ್ಯದ ಮಧುಗಿರಿ ಆರ್.ಟಿ.ಒ ರಿಜಿಸ್ಟ್ರೇಷನ್ ನ ಕೆಎ 64 ಎಸ್ 3154 ನಂಬರಿನ ಹೋಂಡಾ ಶೈನ್ ಬೈಕ್ ಆಗಿದ್ದು, ಆಂಧ್ರ ಕರ್ನಾಟಕ ಗಡಿಭಾಗದ ಮೂಲದವರು ಎಂದು ತಿಳಿದುಬಂದಿದೆ. ಅನಂತಪುರ ಜಿಲ್ಲೆಯ ಹಿಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *