ಪೆಟ್ರೋಲ್ ಬಂಕ್ ದರೋಡೆ- ಅಪ್ರಾಪ್ತ ಸೇರಿ ಮೂವರು ಅರೆಸ್ಟ್

ಮಡಿಕೇರಿ: ಪೆಟ್ರೋಲ್ ಬಂಕ್ ದರೋಡೆ ಮಾಡಿ ತಲೆ ಮರೆಸಿಕೊಂಡಿದ್ದ ಅಪ್ರಾಪ್ತ ಸೇರಿದಂತೆ ಮೂವರು ಆರೋಪಿಗಳನ್ನು ಕೊಡಗು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ರಾಜೀವ್ ನಗರದ ನಿವಾಸಿಗಳಾದ ಸೈಯ್ಯದ್ ಸಕ್ಲೇನ್ (21), ಅಕ್ಬರ್ ಶರೀಪ್ (18) ಹಾಗೂ ಓರ್ವ ಅಪ್ರಾಪ್ತ ಬಂಧಿತ ಆರೋಪಿಗಳು. ಬಂಧಿತರಿಂದ 20,500 ರೂ.ವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಶಾಂತಿನಗರದ ಮತ್ತೋರ್ವ ಆರೋಪಿ ನುಹೀದ್ ಖಾನ್ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಅಪ್ರಾಪ್ತ ಸೇರಿದಂತೆ ನಾಲ್ವರು ಡಿಸೆಂಬರ್ 12ರಂದು ಬೆಳಗ್ಗೆ 5 ಗಂಟೆಗೆ ವಿರಾಜಪೇಟೆ ತಾಲೂಕಿನ ಕುಟ್ಟಾ-ಮಾನಂದವಾಡಿ ರಸ್ತೆಯಲ್ಲಿರುವ ಅನುಗ್ರಹ ಪೆಟ್ರೋಲ್ ಬಂಕ್‍ಗೆ ಕೆಎ-03 ಎಎಫ್-3919 ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದಿದ್ದರು. ಈ ವೇಳೆ ಸಂಚು ಹಾಕಿ ಬಂಕ್‍ನಲ್ಲಿದ್ದ 24,200 ರೂ. ನಗದು ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಪೆಟ್ರೋಲ್ ಬಂಕ್ ಮಾಲೀಕ ಚಂದನ್ ಕಾಮತ್ ಅವರು ಕುಟ್ಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಮಾರ್ಗದರ್ಶನ ಹಾಗೂ ಕುಟ್ಟ ಸರ್ಕಲ್ ಇನ್ಸ್‍ಪೆಕ್ಟರ್ ಎಸ್.ಪರಶಿವಮೂರ್ತಿ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿತ್ತು. ಈ ತಂಡವು ಆರೋಪಿಗಳ ಜಾಲವನ್ನು ಪತ್ತೆ ಹಚ್ಚಿ ಶುಕ್ರವಾರ ಬಂಧಿಸಿ, ಅವರ ಬಳಿ ಇದ್ದ 20,500 ರೂ.ವನ್ನು ವಶಕ್ಕೆ ಪಡೆಯಲಾಗಿದೆ.

Comments

Leave a Reply

Your email address will not be published. Required fields are marked *