ಕಂಬಳ ನೋಡಲು ಹೋದ ಯುವಕ ಬಾವಿಯಲ್ಲಿ ಶವವಾಗಿ ಪತ್ತೆ

ಮಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಬುಧವಾರ ಉದ್ಘಾಟಿಸಿದ್ದ ಮೂಡಬಿದ್ರೆಯ ಕಡಲಕೆರೆ ನಿಸರ್ಗಧಾಮದಲ್ಲಿ ನಡೆದ ಕೋಟಿ ಚೆನ್ನಯ ಜೋಡುಕೆರೆ ಕಂಬಳಕ್ಕೆ ಹೋದ ಯುವಕ ಗುರುವಾರ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಕಂಬಳಕ್ಕಾಗಿ ಬಂದಿದ್ದ ಮಂಗಳೂರಿನ ಕಿನ್ನಿಗೋಳಿ ತೋಕೂರು ನಿವಾಸಿ ಲೋಹಿತ್ ದೇವಾಡಿಗ(26) ಸಾವನ್ನಪ್ಪಿದ ದುರ್ದೈವಿ. ಈತ ಬುಧವಾರ ನಡೆದ ಕಂಬಳಕ್ಕಾಗಿ ಬಂದಿದ್ದು ರಾತ್ರಿಯೂ ಕಂಬಳದಲ್ಲಿ ಭಾಗಿಯಾಗಿದ್ದನು. ಆದರೆ ಗುರುವಾರ ಮುಂಜಾನೆ ಮನೆಗೂ ಬಾರದೆ ನಾಪತ್ತೆಯಾಗಿದ್ದನು. ಇದರಿಂದ ಹೆದರಿದ ಮನೆಯವರು ಎಲ್ಲರಲ್ಲಿ ವಿಚಾರಿಸಿದ್ದರು. ಆದರೆ ಕಂಬಳ ನಡೆದ ಪ್ರದೇಶದ ಒಂದು ತೆರೆದ ಬಾವಿಯಲ್ಲಿ ಲೋಹಿತ್ ಶವವಾಗಿ ಪತ್ತೆಯಾಗಿದ್ದಾನೆ.

ತನ್ನ ಸ್ನೇಹಿತನ ಜೊತೆ ಬಂದಿದ್ದ ಲೋಹಿತ್, ಕಂಬಳದ ಭಾಗವಾಗಿ ನಡೆಯುತ್ತಿದ್ದ ಇಸ್ಪೀಟ್ ಆಟ ಆಡುತ್ತಿದ್ದನು. ಈ ವೇಳೆ ಸ್ಥಳೀಯರು ಯಾರೋ ಪೊಲೀಸ್.. ಪೊಲೀಸ್.. ಎಂದು ಬೊಬ್ಬೆ ಹಾಕಿದ್ದರಿಂದ ಆತ ಓಡಿ ಹೋಗಿದ್ದು, ಈ ವೇಳೆ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಮೃತದೇಹದ ಮುಖದಲ್ಲಿ ರಕ್ತದ ಕಲೆಗಳು ಇದ್ದ ಕಾರಣ ಸ್ಥಳಕ್ಕಾಗಮಿಸಿದ ಮೂಡಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿ ಕೊಲೆಯಾಗಿರಬಹುದು ಎಂದು ಶಂಕಿಸಿ, ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *