ಪ್ರವಾಹ ಎಫೆಕ್ಟ್ – ಬಾಗಲಕೋಟೆಯಲ್ಲಿ ಶೇ. 60 ರಿಂದ 70 ಬೆಳೆ ಹಾನಿ

-3 ಲಕ್ಷ ಕ್ವಿಂಟಲ್ ಈರುಳ್ಳಿ ಲಾಸ್

ಬಾಗಲಕೋಟೆ: ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರವಾಹದಿಂದ ಬಾಗಲಕೋಟೆ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಪ್ರವಾಹದ ಎಫೆಕ್ಟ್ ನಿಂದ ಬಾಗಲಕೋಟೆ ಜಿಲ್ಲೆಯ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.

ಜಿಲ್ಲೆಯಲ್ಲಿ ಈ ವರ್ಷ ಅಂದಾಜು 3 ಲಕ್ಷ ಕ್ವಿಂಟಾಲ್ ಈರುಳ್ಳಿ ಬೆಳೆ ಹಾನಿಯಾಗಿದೆ. ಇದಕ್ಕೆ ಮಾರುಕಟ್ಟೆ ಅಂಕಿ ಅಂಶಗಳೇ ಜೀವಂತ ಸಾಕ್ಷಿಯಾಗಿದ್ದು, ಪ್ರತಿ ವರ್ಷ ಏಪ್ರಿಲ್‍ನಿಂದ ಡಿಸೆಂಬರ್ ವರೆಗೂ ಬರುತ್ತಿದ್ದ ಈರುಳ್ಳಿ ಈ ಬಾರಿ ಭಾರೀ ಕುಸಿತ ಕಂಡಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದೆ.

ಪ್ರತಿ ವರ್ಷ ಏಪ್ರಿಲ್‍ನಿಂದ ಡಿಸೆಂಬರ್ ವರೆಗೂ 4 ರಿಂದ 4.5 ಲಕ್ಷ ಕ್ವಿಂಟಾಲ್ ಈರುಳ್ಳಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈ ವರ್ಷ ಕೇವಲ 1.50 ಲಕ್ಷ ಕ್ವಿಂಟಾಲ್ ಈರುಳ್ಳಿ ಮಾತ್ರ ಮಾರುಕಟ್ಟೆಗೆ ಬಂದಿದೆ. ಸದ್ಯ ರೈತರ ಬಳಿಯಿದ್ದ ಈರುಳ್ಳಿ ಖಾಲಿ ಆಗಿದೆ. ಆದರೆ ಬೆಲೆ ಗಗನಕ್ಕೇರಿದೆ.

ಪ್ರತಿ ಶನಿವಾರ ಹಾಗೂ ಗುರುವಾರ ಬಾಗಲಕೋಟೆ ಮಾರುಕಟ್ಟೆಗೆ ಕೇವಲ 458 ಕ್ವಿಂಟಾಲ್ ಈರುಳ್ಳಿ ಮಾತ್ರ ಮಾರಾಟಕ್ಕೆ ಬರುತ್ತಿದೆ. ಹೀಗಾಗಿ ಈರುಳ್ಳಿ ಕ್ವಿಂಟಾಲ್‍ಗೆ ಕನಿಷ್ಟ ಒಂದು ಸಾವಿರದಿಂದ ಗರಿಷ್ಠ 8 ಸಾವಿರ ರೂ.ವರೆಗೂ ಹರಾಜಾಗುತ್ತಿದೆ.

ಈ ವರ್ಷ ಬಾಗಲಕೋಟೆ ಜಿಲ್ಲೆಯ ಮಾರುಕಟ್ಟೆಯಲ್ಲಿ ಈರುಳ್ಳಿ ಗರಿಷ್ಠ 12 ಸಾವಿರದ ವರೆಗೂ ಮಾರಾಟ ಆಗಿದೆ. ಆದರೆ ಕಳೆದ ವರ್ಷ ಈರುಳ್ಳಿಗೆ ಭಾರೀ ಪ್ರಮಾಣದಲ್ಲಿ ಇದ್ದ ಕಾರಣ ಕ್ವಿಂಟಲ್‍ಗೆ ಕನಿಷ್ಠ 300 ರಿಂದ ಗರಿಷ್ಠ 1350 ರೂ. ಬೆಲೆ ಸಿಕ್ಕಿತ್ತು. ಈಗ ಬೆಲೆ ಇದೆ, ಆದರೆ ಬೆಳೆ ಇಲ್ಲ ಎಂದು ರೈತರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಪೇಚಾಡುವಂತಾಗಿದೆ. ಪ್ರವಾಹದಿಂದ ಈರುಳ್ಳಿ ಬೆಳೆ ಲಾಸ್ ಆಗಿದ್ದು ವರ್ತಕರಿಗೂ ವ್ಯಾಪಾರ, ವಹಿವಾಟಿನ ಮೇಲೂ ಪರಿಣಾಮ ಬೀರಿದೆ.

Comments

Leave a Reply

Your email address will not be published. Required fields are marked *