ಬಡವ ಪಂಚರ್ ಹಾಕ್ತಾನೆ, ಕಸ ಗುಡಿಸ್ತಾನೆ – ಸೂರ್ಯ ವಿರುದ್ಧ ಡಿಕೆಶಿ ಕಿಡಿ

– ಬಿಜೆಪಿಯಿಂದ ಬಡವರು, ದಲಿತರಿಗೆ ಅವಮಾನ

ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭಾನುವಾರ ನಗರ ಟೌನ್‍ಹಾಲ್ ಎದುರು ಸಿಎಎ ಪರ ಮಾತನಾಡಿದ್ದಕ್ಕೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ತೇಜಸ್ವಿ ಸೂರ್ಯಗೆ ದಲಿತರು, ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಕೆಂಡಾಮಂಡಲರಾಗಿದ್ದಾರೆ.

ತೇಜಸ್ವಿ ಸೂರ್ಯ ಅವರ ಹೇಳಿಕೆ ವಿರುದ್ಧ ಕಿಡಿಕಾರಿರುವ ಡಿಕೆ ಶಿವಕುಮಾರ್ ಅವರು, ಬಡವ ಪಂಚರ್ ಹಾಕುತ್ತಿದ್ದಾನೆ, ಕಸ ಗುಡಿಸುತ್ತಿದ್ದಾನೆ, ಕ್ಲೀನಿಂಗ್ ಮಾಡುತ್ತಿದ್ದಾನೆ. ಆದರೆ ಕಳ್ಳತನ ಮಾಡಿಲ್ಲ, ದೇಶದ್ರೋಹ ಮಾಡಿಲ್ಲ. ನೀವು ಅವರಿಗೆ ವಿದ್ಯಾಭ್ಯಾಸ ಕೊಡಿ, ಕೆಲಸ ಕೊಡಿ. ಯಾವುದೇ ಕಾರಣಕ್ಕೂ ಸ್ವಾಭಿಮಾನವನ್ನು ಕೆಣಕಲು ಹೋಗಬೇಡಿ ಎಂದು ಎಚ್ಚರಿಕೆ ನೀಡಿದರು.

ಭಾಷಣ ಮಾಡುವವರು ಬಂದು ಕಸ ಕೂಡಿಸುವುದಿಲ್ಲ. ಪಂಚರ್ ಹಾಕುವವ ಇದ್ದರೇನೆ ಜನ ಸಾಮಾನ್ಯರು ಕೆಲಸ ಮಾಡಲು ಸಾಧ್ಯ. ಕಸ ಗೂಡಿಸುವವ, ಪಂಚರ್ ಹಾಕುವವ ನಿರುದ್ಯೋಗಿಯಾಗದೆ ಕೆಲಸ ಮಾಡುತ್ತಿದ್ದಾರೆ. ಮಾನವೀಯ ಕೆಲಸ ಮಾಡುವವರು ಇಲ್ಲದಿದ್ದರೆ ಜನರು ಬದುಕಲು ಸಾಧ್ಯವಿಲ್ಲ. ನೀವೂ ಅವರಿಗೆ ಶಿಕ್ಷಣ ನೀಡಲಿಲ್ಲ, ಸರಿಯಾದ ಉದ್ಯೋಗ ನೀಡಿಲ್ಲ ಎಂದು ತೇಜಸ್ವಿ ಸೂರ್ಯ ಅವರ ಹೆಸರನ್ನು ಪ್ರಸ್ತಾಪ ಮಾಡದೆ ಕಿಡಿಕಾರಿದರು.

ಟೌನ್‍ಹಾಲ್ ಎದುರು ನಡೆದ ಸಿಎಎ ಪರ ಪ್ರತಿಭಟನೆಯಲ್ಲಿ ಮಾತನಾಡಿದ್ದ ಸಂಸದ ತೇಜಸ್ವಿ ಸೂರ್ಯ, ಇಲ್ಲಿ ಸೇರಿರುವವರೆಲ್ಲರೂ ಈ ಕಾನೂನು ಏನು..? ಈ ಕಾನೂನಿಂದ ದೇಶಕ್ಕೆ ಏನು ಸಹಾಯ ಆಗುತ್ತೆ? ಈ ಕಾನೂನು ಜಾರಿಯಾಗುವುದರಿಂದ ದೇಶದ ಒಳಿತು ಹೇಗೆ ಆಗುತ್ತೆ? ಅಂತ ತಿಳಿದುಕೊಂಡಿರುವ ವಿದ್ಯಾಂತರಾಗಿದ್ದಾರೆ.

ಪ್ರತಿಭಟನೆ ನಡೆಸುತ್ತಿರುವ ಪ್ರತಿಯೊಬ್ಬರು ಬೆಂಗಳೂರಿನ ಐಟಿ ಸೆಕ್ಟರ್ ನಲ್ಲಿ, ಬಿಟಿ ಸೆಕ್ಟರ್ ನಲ್ಲಿ ಕೆಲಸ ಮಾಡುತ್ತಿರುವಂತಹ, ದೇಶದ ಆರ್ಥಿಕತೆಗೆ ಕೊಡುಗೆ ನೀಡುವಂತಹ, ವಕೀಲರು ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿರುವವರು, ಸಾಮಾನ್ಯ ಕೆಲಸ ಮಾಡುತ್ತಿರುವ ಆಟೋ ಚಾಲಕರು ಎಲ್ಲರೂ ಸೇರಿದ್ದಾರೆ. ಎದೆ ಸೀಳಿದ್ರೆ ಎರಡು ಅಕ್ಷರ ಇರಲ್ಲ, ಬರೀ ಪಂಕಚ್ಚರ್ ಅಂಗಡಿ ಹಾಕಿಕೊಂಡಿವವರು ಇಲ್ಲಿ ಸೇರಿಲ್ಲ ಎಂದು ವ್ಯಂಗ್ಯವಾಡಿದ್ದರು.

Comments

Leave a Reply

Your email address will not be published. Required fields are marked *