ಮದ್ವೆ ಹೆಸ್ರಲ್ಲಿ ವಿಧವೆಯರಿಗೆ ವಂಚನೆ- ಎಂ.ಕಾಂ ಪದವೀಧರನ ಬಂಧನ

ಮೈಸೂರು: ಮದುವೆ ಆಗುವುದಾಗಿ ನಂಬಿಸಿ ವಿಧವೆಯರನ್ನು ವಂಚಿಸಿದ ವಂಚಕ ಈಗ ಪೊಲೀಸರ ಅತಿಥಿ ಆಗಿದ್ದಾನೆ.

ಕೊಯಮತ್ತೂರಿನ ಯುವರಾಜ್ ಬಂಧಿತ ಆರೋಪಿ. ಮೈಸೂರಿನ ಕೆ.ಆರ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಯುವರಾಜ್, ವಿಧವೆಯರಿಂದ ಚಿನ್ನದ ಸರ, ನಗದು ಲಪಟಾಯಿಸಿ ಕಣ್ಮರೆಯಾಗುತ್ತಿದ್ದನು. ಯುವರಾಜ್ ಅಮಾಯಕ ವಿಧವೆಯರನ್ನೇ ಟಾರ್ಗೆಟ್ ಮಾಡುತ್ತಿದ್ದನು. ಶಾದಿ. ಕಾಂ ಮ್ಯಾಟ್ರಿಮೋನಿಯಲ್ ವೆಬ್‍ಸೈಟ್ ಮೂಲಕ ವಿಧವೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು.

ಬಾಳು ಕೊಡುವ ನೆಪದಲ್ಲಿ ಹಾಸನ, ಮೈಸೂರು, ಬೆಂಗಳೂರಿನ ನಾಲ್ವರು ವಿಧವೆಯರಿಗೆ ವಂಚಿಸಿದ್ದನು. ಮದುವೆ ಆಗಬೇಕಿದರೆ ದೋಷ ನಿವಾರಣೆ ಪೂಜೆ ಮಾಡಿಸಬೇಕು. ಪೂಜೆಗೆ ನಿಮ್ಮ ಚಿನ್ನದ ಸರ ಬೇಕು ಎಂದು ಹೇಳಿ ಚಿನ್ನದ ಸರ ಪಡೆದು ವಂಚಿಸುತ್ತಿದ್ದನು. ವಿಧವೆಯೊಬ್ಬರು ಕೊಟ್ಟ ದೂರಿನ ಆಧಾರದ ಮೇಲೆ ಮೈಸೂರಿನ ಕೆ.ಆರ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಂಚಕನನ್ನು ಬಂಧಿಸಿದ್ದಾರೆ.

ಎಂ.ಕಾಂ ಓದಿರುವ ವಂಚಕ ಯುವರಾಜ್, ಆಟೋ ಮೊಬೈಲ್ ವ್ಯಾಪಾರ ನಡೆಸುತ್ತಿರುವುದಾಗಿ ವಿಧವೆಯರನ್ನು ನಂಬಿಸುತ್ತಿದ್ದನು. ಶಾದಿ. ಕಾಂ ಹಾಗೂ ಸಂಗಮ್ ಮ್ಯಾಟ್ರಿಮೋನಿಯಲ್ ನಲ್ಲಿ ಮೆಂಬರ್ ಆಗಿ ವಿಧವೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ತನಿಖೆ ವೇಳೆಯಲ್ಲಿ ನಾಲ್ಕು ವಿಧವೆಯರಿಗೆ ವಂಚಿಸಿರುವ ಮಾಹಿತಿ ಬಯಲಾಗಿದೆ.

Comments

Leave a Reply

Your email address will not be published. Required fields are marked *