ಪದ್ಮಶ್ರೀ ಪುರಸ್ಕೃತರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ – ಪೊಲೀಸ್ ಠಾಣೆಗೆ ದೂರು

ಬಾಗಲಕೋಟೆ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ಕ್ರಿಯೆಟ್ ಮಾಡಿ ಪೋಸ್ಟ್ ಒಂದನ್ನು ಹರಿಬಿಡಲಾಗಿದೆ.

ಭಾವೈಕ್ಯತೆ ಹರಿಕಾರ ಪ್ರವಚನಕಾರ, ಕನ್ನಡದ ಕಬೀರ ಎಂದೇ ಹೆಸರುವಾಸಿ ಆಗಿರುವ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಮಹಲಿಂಗಪುರ ಪಟ್ಟಣದ ನಿವಾಸಿ ಇಬ್ರಾಹಿಂ ಸುತಾರ್ ಅವ್ರ ಹೆಸರಿನಲ್ಲಿ, ಕೆಲ ಕಿಡಿಗೇಡಿಗಳು ಪೌರತ್ವ ತಿದ್ದುಪಡಿ ಕಾಯ್ದೆ ಪರ ಇರುವ ಪೋಸ್ಟ್ ಮಾಡಿದ್ದಾರೆ.

“ಯಾವ ಭಾರತೀಯ ಮುಸಲ್ಮಾನರಿಗೂ ಪೌರತ್ವ ತಿದ್ದುಪಡಿಯಿಂದ ತೊಂದರೆಯಿಲ್ಲ. ಸಮಾಜದಲ್ಲಿ ಸುಳ್ಳು ಸುದ್ದಿ ಯಾರೂ ಹಬ್ಬಿಸಬಾರದು. ನಾವೆಲ್ಲ ಭಾರತೀಯರೇ” ಎಂದು ಬರೆದಿರುವ ಪೋಸ್ಟ್ ಹರಿಬಿಡಲಾಗಿದೆ.

ಫೇಸ್ ಬುಕ್ ನಲ್ಲಿ ಪರ ವಿರೋಧ ಕಮೆಂಟ್ಸ್ ಜೋರಾಗಿ ನಡೆದಿವೆ. ಅಲ್ಲದೇ ಕೆಲವರು ಪೋಸ್ಟ್ ಕರೆ ಮಾಡಿ ಪ್ರವಚನಕಾರ ಇಬ್ರಾಹಿಂ ಸುತಾರ್ ಅವರ ಜೊತೆ ವಾದ ಕೂಡಾ ಮಾಡಿದ್ದಾರೆ.

ಇಬ್ರಾಹಿಂ ಅವರ ಪುತ್ರ ಹುಮಾಯುನ್ ಅವರು, ಇದು ನಮ್ಮ ತಂದೆ ಖಾತೆಯಲ್ಲ ಎಂದು ಕಮೆಂಟ್ಸ್ ನಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ವಿಷಯ ಅರಿತಿರುವ ಇಬ್ರಾಹಿಂ ಸುತಾರ್ ಅವರು ನಕಲಿ ಫೇಸ್ ಬುಕ್ ಖಾತೆ ಬಗ್ಗೆ ಮಹಲಿಂಗಪುರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಅಲ್ಲದೇ ಈ ಕುರಿತು ಮಾಧ್ಯಮಗಳಿಗೆ ವಿಷಯ ಸ್ಪಷ್ಟಪಡಿಸಿದ್ದಾರೆ.

ನಾನು ಫೇಸ್ ಬುಕ್ ಖಾತೆಯನ್ನೇ ಹೊಂದಿಲ್ಲ. ಯಾರೋ ಕಿಡಿಗೇಡಿಗಳು ನನ್ನ ಹೆಸರಿನ ನಕಲಿ ಫೇಸ್ ಬುಕ್ ಖಾತೆ ಕ್ರಿಯೆಟ್ ಮಾಡಿ ಈ ರೀತಿಯ ವಿಷಯ ಹರಿಬಿಟ್ಟಿದ್ದಾರೆ. ನನಗೆ ರಾಜಕೀಯ ಗೊತ್ತಿಲ್ಲ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ನನಗೆ ಸಂಪೂರ್ಣ ಗೊತ್ತಿಲ್ಲ. ಇದು ನನ್ನ ಫೇಸ್ ಬುಕ್ ಖಾತೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *