ನಮ್ಮವರಿಗೆ ಡಿಸಿಎಂ ಸ್ಥಾನ ಸಿಗದಿದ್ದಕ್ಕೆ ಬಿಎಸ್‍ವೈಗೆ ಉಗಿದಿದ್ದೇನೆ: ಪ್ರಸನ್ನಾನಂದ ಪುರಿ ಸ್ವಾಮೀಜಿ

ಕೊಪ್ಪಳ: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಧಿಕಾರಕ್ಕೆ ಬಂದ ಬಳಿಕ ವಾಲ್ಮೀಕಿ ಸಮಾಜಕ್ಕೆ ತಕ್ಷಣ ಉಪ ಮುಖ್ಯಮಂತ್ರಿ ಸ್ಥಾನ ಕೊಡದಿದ್ದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಾನು ಉಗಿದಿದ್ದೇನೆ ಎಂದು ವಾಲ್ಮೀಕಿ ಸಮಾಜದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ವಾಲ್ಮೀಕಿ ಸಮಾಜವನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದೆ. ಚುನಾವಣಾ ಪೂರ್ವದಲ್ಲಿ ವಾಲ್ಮೀಕಿ ಸಮಾಜಕ್ಕೆ ಡಿಸಿಎಂ ಸ್ಥಾನ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಸಮಾಜಕ್ಕೆ ಡಿಸಿಎಂ ಸ್ಥಾನ ಕೊಡಲಿಲ್ಲ. ಇದರಿಂದ ನಾನು ಅಂದೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಎಂ ನಡೆ ಬಗ್ಗೆ ಉಗುದಿದ್ದೀನಿ ಎಂದರು.

ನನಗೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿಎಂ ಯಡಿಯೂರಪ್ಪ ಅವರನ್ನು ಕಟ್ಕೊಂಡ್ ನಾನೇನ್ ಮಾಡ್ಲಿ. ನನಗೆ ನನ್ನ ವಾಲ್ಮೀಕಿ ಸಮುದಾಯ ಹಾಗೂ ಸಮುದಾಯದ ಜನರೇ ಮುಖ್ಯ. ವಾಲ್ಮೀಕಿ ಸಮಾಜಕ್ಕೆ ಅನ್ಯಾಯ ಆಗಿದೆ ಎಂದು ಅಸಮಾಧಾನ ಹೊರ ಹಾಕಿದರು.

ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಯಂತೆ ಡಿಸಿಎಂ ಸ್ಥಾನ ಕೊಡಲಿ. ಅಲ್ಲದೆ ಈಗ ಡಿಸಿಎಂ ಸ್ಥಾನಕ್ಕೆ ರಮೇಶ್ ಜಾರಕಿಹೊಳೆ ಹಾಗೂ ಶ್ರೀರಾಮುಲು ಇಬ್ಬರೂ ಆಕಾಂಕ್ಷಿತರಾಗಿದ್ದು, ಇಬ್ಬರಲ್ಲಿ ಯಾರಿಗೆ ಸ್ಥಾನ ಕೊಟ್ಟರೂ ಸಂತೋಷ. ಇಬ್ಬರು ನನ್ನ ಎರಡು ಕಣ್ಣುಗಳಿದ್ದಂತೆ ಎಂದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ವಾಲ್ಮೀಕಿ ಮಹರ್ಷಿ ಅವರು ರಾಮಾಯಣ ಬರೆದವರು. ಅವರ ಮಂದಿರ ನಿರ್ಮಾಣ ಮಾಡಬೇಕು. ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿ ಶ್ರೀಗಳ ಹೆಸರನ್ನು ನಾಮಕರಣ ಮಾಡಬೇಕು. ಸರ್ಕಾರ ಮುಂದೆ ನಿರ್ಮಾಣ ಮಾಡುವ ಕ್ಯಾಂಟಿನ್‍ಗಳಿಗೆ ಇಂದಿರಾ ಬದಲಾಗಿ ವಾಲ್ಮೀಕಿ ಅನ್ನ ಕುಟೀರ ಎಂದು ನಾಮಕರಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿರ್ಧಾರವನ್ನು ಸ್ವಾಗತಿಸ್ತೇವೆ ಎಂದು ತಿಳಿಸಿದರು.

ಎಲ್ಲರೂ ಮತ ಬ್ಯಾಂಕ್‍ಗಾಗಿ ಕೀಳುಮಟ್ಟದ ರಾಜಕಾರಣ ಮಾಡುತ್ತಾರೆ. ಸಚಿವ ಶ್ರೀರಾಮುಲು ಅವರು ಸಿದ್ದರಾಮಯ್ಯ ಅವರ ವಿರುದ್ಧ ಬಾದಾಮಿಯಲ್ಲಿ ಸ್ಪರ್ಧೆ ಮಾಡಿದ್ದರು. ಆಗ ನಾನೇ ಶ್ರೀರಾಮುಲು ಅವರಿಗೆ ಬೇಡ ಎಂದಿದ್ದೆ. ಏಕೆಂದರೆ ಸಮಾಜ ಸಮಾಜದ ನಡುವೆ ವೈಮನಸ್ಸು ಮೂಡುತ್ತದೆ ಎನ್ನುವುದು ನನ್ನ ವಿಚಾರವಾಗಿತ್ತು. ಇಂದು ಆ ಪರಿಸ್ಥಿತಿ ಎದುರಿಸುತ್ತಿದ್ದೇವೆ ಎಂದರು.

Comments

Leave a Reply

Your email address will not be published. Required fields are marked *