ಪ್ರವಾಸಿಗರಿಗೆ ಮುಕ್ತವಾಗದೆ ನಿರುಪಯೋಗಿಯಾಗಿದೆ ನೆಹರು ಮಂಟಪ

ಮಡಿಕೇರಿ: ದಕ್ಷಿಣದ ಕಾಶ್ಮೀರ ಕೊಡಗು ಪ್ರವಾಸಿತಾಣಗಳ ಆಗರ. ಅದಕ್ಕೆ ಮತ್ತೊಂದು ತಾಣ ಸೇರ್ಪಡೆ ಎಂಬಂತೆ ನೆಹರು ಮಂಟಪದ ಜೀರ್ಣೋದ್ಧಾರವಾಗಿದೆ. ರಾಜಾಸೀಟ್‍ಗೆ ಕೂಗಳತೆ ದೂರದಲ್ಲೇ ನೆಹರು ಮಂಟಪ ಇದೆ. ಆದರೆ ಇಂದಿಗೂ ಅದು ಜನರ ವೀಕ್ಷಣೆಗೆ ಮಾತ್ರ ಮುಕ್ತವಾಗಿಲ್ಲ.

ಕೊಡಗಿನ ಪ್ರಮುಖ ಆರ್ಥಿಕ ಮೂಲ ಪ್ರವಾಸೋದ್ಯಮ. ಪ್ರವಾಸೋದ್ಯಮದಿಂದಲೇ ಇಲ್ಲಿನ ಸಾಕಷ್ಟು ಜನರು ತಮ್ಮ ಬದುಕು ಕಂಡುಕೊಂಡಿದ್ದಾರೆ. ಈ ಉದ್ದೇಶದಿಂದಲೇ ಜಿಲ್ಲಾಡಳಿತ ಕೂಡ ಪ್ರವಾಸೋದ್ಯಮಕ್ಕೆ ಸಾಕಷ್ಟು ಉತ್ತೇಜನ ನೀಡುತ್ತಿದೆ. ಪ್ರವಾಸಿಗರ ಹಾಟ್‍ಸ್ಪಾಟ್ ಎಂದೇ ಕರೆಸಿಕೊಳ್ಳುವ ರಾಜಾಸೀಟ್ ವೀಕ್ಷಣೆಗೆ ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದು, ಹೀಗೆ ಬರುವ ಪ್ರವಾಸಿಗರಿಗೆ ಮತ್ತಷ್ಟು ಖುಷಿ ದೊರೆಯಲಿ ಎಂಬ ಉದ್ದೇಶದಿಂದ ಕಳೆದ 7 ತಿಂಗಳ ಹಿಂದೆಯೇ ರಾಜಾಸೀಟ್‍ನಿಂದ ಕೇವಲ ನೂರು ಮೀಟರ್ ದೂರದಲ್ಲಿನ ನೆಹರು ಮಂಟಪವನ್ನು ಪುನರುಜ್ಜೀವನಗೊಳಿಸಲಾಗಿದೆ.

1953 ರಲ್ಲಿ ಮಾಜಿ ಪ್ರಧಾನಿ ನೆಹರು ಮಡಿಕೇರಿಗೆ ಆಗಮಿಸಿದ್ದ ಸಂದರ್ಭ ಇದೇ ಮಂಟಪದಲ್ಲಿ ಕುಳಿತು ಪ್ರಕೃತಿಯ ಸೌಂದರ್ಯ ಸವಿದು ಆನಂದಿಸಿದ್ದಂತೆ. ಅವರ ನೆನಪಿಗಾಗಿ ಇಂದಿಗೂ ಈ ಮಂಟಪವನ್ನು ಉಳಿಸಿಕೊಳ್ಳಲಾಗಿದೆ. ರಾಜಾಸೀಟ್‍ಗಿಂತ ಎತ್ತರದ ಪ್ರದೇಶವಾಗಿರುವುದರಿಂದ ಸುತ್ತಲೂ ಮುಗಿಲಿಗೆ ಮುತ್ತಿಕ್ಕುವ ಬೆಟ್ಟಗಳ ಸಾಲಿನ ವ್ಯೂಪಾಯಿಂಟ್ ಇದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ವಿವಿಧ ಕಾಮಗಾರಿಗಳಿಗೆ 18 ಲಕ್ಷ ರೂ. ಹಣ ಬಿಡುಗಡೆ ಮಾಡಿ ಸ್ಥಳದ ಅಭಿವೃದ್ಧಿಗೆ ಒತ್ತು ನೀಡಿದೆ.

ಈಗಾಗಲೇ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಚಿಕ್ಕಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ವಿಪರ್ಯಾಸವೆಂದರೆ ಇಂದಿಗೂ ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡಿಲ್ಲ. ಅಷ್ಟೇ ಅಲ್ಲ ಕಾಮಗಾರಿ ಬಹುತೇಕ ಮುಗಿದಿದ್ದರೂ ಇಂದಿಗೂ ಪ್ರವಾಸಿಗರ ದರ್ಶನಕ್ಕೆ ಮುಕ್ತವಾಗದ ದೂರು ಕೇಳಿ ಬಂದ ಹಿನ್ನೆಲೆ ಇಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಂಜಿನಿಯರ್ ಸರಿಯಾದ ಪ್ಲಾನ್ ಮಾಡಿದ್ದರೆ ಇನ್ನಷ್ಟು ಉತ್ತಮ ಪ್ರವಾಸಿ ತಾಣ ಮಾಡಬಹುದಿತ್ತು. ಆದರೆ ಈಗಾಗಲೇ ಕೆಲಸಗಳು ಮುಗಿದಿರುವುದರಿಂದ ತಕ್ಷಣವೇ ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *