ಕಳ್ಳನೆಂದು ಶಂಕಿಸಿ ನಡು ರಸ್ತೆಯಲ್ಲಿ ವ್ಯಕ್ತಿಯ ಮರ್ಮಾಂಗ ಸುಟ್ಟು ಕೊಂದ ದುಷ್ಕರ್ಮಿಗಳು – ವಿಡಿಯೋ ವೈರಲ್

ತಿರುವನಂತಪುರಂ: ಕಳ್ಳತನದ ಆರೋಪ ಮಾಡಿ ವ್ಯಕ್ತಿಯೋರ್ವನನ್ನು ಏಳು ಮಂದಿಯ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿ, ಆತನ ಮರ್ಮಾಂಗವನ್ನೇ ಸುಟ್ಟು ಕೊಲೆಗೈದ ಅಮಾನುಷ ಘಟನೆ ಕೇರಳದಲ್ಲಿ ನಡೆದಿದೆ.

ತಿರುವಲ್ಲಂ ಜಿಲ್ಲೆಯ ನಿವಾಸಿ ಅಜೀಶ್ ಮೃತ ದುರ್ದೈವಿ. ತಂಪನೂರು ಪ್ರದೇಶದ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕನೋರ್ವ ಮಲಗಿದ್ದ ವೇಳೆ ಆತನ ಪರ್ಸ್ ಕಳವು ಮಾಡಲಾಗಿತ್ತು. ಆದರೆ ಆ ಪರ್ಸನ್ನು ಅಜೀಶ್ ಕದ್ದಿದ್ದಾನೆ ಎಂದು ಆರೋಪಿಸಿ, ಸ್ಥಳದಲ್ಲಿದ್ದ ಗುಂಪೊಂದು ಆತನನ್ನು ಥಳಿಸಿ, ಆತನ ಮರ್ಮಾಂಗವನ್ನು ಸುಟ್ಟು ಚಿತ್ರಹಿಂಸೆ ಕೊಟ್ಟಿದ್ದಾರೆ. ಪರಿಣಾಮ ಅಜೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅಲ್ಲದೆ ಜನರು ಅಜೀಶ್‍ನನ್ನು ಹೊಡೆಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ಸಂತ್ರಸ್ತನಿಗೆ ಚಿತ್ರಹಿಂಸೆ ಕೊಟ್ಟು ಕೊಂದ ಜನರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ಈ ವಿಡಿಯೋ ಪೊಲೀಸರ ಕೈತಲುಪಿದ್ದು, ಇದರ ಮೂಲಕವೇ ಸಂತ್ರಸ್ತನನ್ನು ಕೊಂದ ಐವರು ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ, ಬಂಧಿಸಿದ್ದಾರೆ. ಅಲ್ಲದೆ ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬಂಧಿತ ಆರೋಪಿಗಳನ್ನು ನಾಸೀರ್, ದಿನೇಶ್ ವರ್ಗಿಸ್, ಅರ್ಜುನ್, ಸಜನ್ ಮತ್ತು ರಾಬಿನ್‍ಸನ್ ಎಂದು ಗುರುತಿಸಲಾಗಿದೆ. ಈಗಾಗಲೇ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

ಮೃತ ವ್ಯಕ್ತಿಯ ಮರ್ಮಾಂಗದ ಶೇ.40ರಷ್ಟು ಭಾಗ ಸುಟ್ಟು ಹೋಗಿದೆ. ಅದ್ದರಿಂದಲೇ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *