ದುರಹಂಕಾರಿ ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಶನಿ – ಜನಾರ್ದನ ಪೂಜಾರಿ

– ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಲು ಸೂಕ್ತ ನಾಯಕ

ಮಂಗಳೂರು: ಕಾಂಗ್ರೆಸ್ ರಾಜ್ಯ ನಾಯಕರ ದುರಹಂಕಾರದಿಂದಾಗಿಯೇ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲಲು ಕಾರಣ ಎಂದು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಕಿಡಿಕಾರಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದುರಾಂಹಕಾರಿಯಾಗಿದ್ದು ಅವರು ಪಕ್ಷಕ್ಕೆ ದೊಡ್ಡ ಶನಿ. ಇಂತವರಿಂದಲೇ ಪಕ್ಷಕ್ಕೆ ಇಂದು ಇಂತಹ ಪರಿಸ್ಥಿತಿ ಬಂದಿರೋದು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಾಯಕರ ವರ್ತನೆಯ ಬಗ್ಗೆ ನಾನು ಮೊದಲೇ ಹೇಳಿದ್ದೇನೆ. ಇದೇ ರೀತಿ ದುರಹಂಕಾರ ಮಾಡಿದರೆ ಚುನಾವಣೆಯಲ್ಲಿ ಹೀನಾಯ ಸೋಲು ಆಗುತ್ತದೆ. ಬಿಜೆಪಿ ಗೆಲ್ಲುತ್ತದೆ ಎಂದಿದ್ದೆ ಅದರಂತೆ ಇಂದು ಫಲಿತಾಂಶ ಬಂದಿದೆ. ನನ್ನ ಮಾತನ್ನು ಅಂದು ಯಾರೂ ಕೇಳಲಿಲ್ಲ ಈಗ ಅನುಭವಿಸುತ್ತಿದ್ದಾರೆ ಎಂದು ಸ್ವಪಕ್ಷದ ನಾಯಕರ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಪ್ರಸ್ತುತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಳಪೆ ಕೆಲಸ ಮಾಡಿದ್ದು ಮುಂದಿನ ಕೆಪಿಸಿಸಿ ಅಧ್ಯಕ್ಷರಾಗಲು ಡಿ.ಕೆ ಶಿವಕುಮಾರ್ ಸೂಕ್ತ ವ್ಯಕ್ತಿ. ಅವರ ಆಯ್ಕೆ ಉತ್ತಮ ಡಿಕೆಶಿಯವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಇದು ನನ್ನ ಅನುಭವದ ಮಾತು, ಅವರೊಬ್ಬ ಧೈರ್ಯವಂತ ಅನ್ನೋದನ್ನು ನಾನು ನೋಡಿದ್ದೇನೆ ಎಂದು ಡಿಕೆಶಿ ಅವರನ್ನು ಹಾಡಿಹೊಗಳಿದರು.

ಡಿಕೆಶಿ ಯಾರಿಗೂ ಹೆದರದೆ ಪಕ್ಷದ ಕೆಲಸ ಮಾಡುತ್ತಾರೆ. ಜೈಲಿಗೆ ಹೋಗಿ ಬಂದಿದ್ದಾರೆ ಅನ್ನೋದು ಸರಿಯಲ್ಲ. ಈಗಿರುವ ಹೆಚ್ಚಿನ ರಾಜಕಾರಣಿಗಳು ಜೈಲಿಗೆ ಹೋಗಿ ಬಂದವರೇ ಇರೋದು. ಡಿಕೆಶಿ ಇತ್ತೀಚೆಗೆ ಜೈಲಿಗೆ ಹೋದ ಬಳಿಕ ಅವರು ಬದಲಾಗಿದ್ದಾರೆ. ಅವರೇ ಕೆಪಿಸಿಸಿ ಅಧ್ಯಕ್ಷರಾದರೆ ಪಕ್ಷ ಉಳಿಯಲಿದೆ ಎಂದು ಪೂಜಾರಿ ಅಭಿಪ್ರಾಯಪಟ್ಟರು.

Comments

Leave a Reply

Your email address will not be published. Required fields are marked *