ನಮ್ಮ ಮೆಟ್ರೋಗೆ ಸುಧಾಮೂರ್ತಿ ಸಹಾಯಹಸ್ತ

ಬೆಂಗಳೂರು: ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರ, ಸಮಾಜಸೇವೆಯಲ್ಲಿ ಇನ್ಫೋಸಿಸ್ ತನ್ನದೆಯಾದ ನೆರವಿನ ಹಸ್ತ ಚಾಚುತ್ತಾ ಬಂದಿದೆ. ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರು ನಮ್ಮ ಮೆಟ್ರೋ ಯೋಜನೆಗೆ ಕೈಜೋಡಿಸಿದ್ದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಬೆಂಗಳೂರಿನ ಮೆಟ್ರೋ ಯೋಜನೆಯ ನಿಲ್ದಾಣವೊಂದಕ್ಕೆ ನೂರು ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡುವುದಾಗಿ ಕಳೆದ ವರ್ಷ ಸುಧಾಮೂರ್ತಿ ಅವರು ಘೋಷಿಸಿದ್ದರು. ಈ ನಿಟ್ಟಿನಲ್ಲಿ ಅವರು ಆರ್.ವಿ ರಸ್ತೆ ಹಾಗೂ ಬೊಮ್ಮಸಂದ್ರ ಮಾರ್ಗದಲ್ಲಿರುವ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಇದೀಗ ಎರಡನೇ ಕಂತಿನಲ್ಲಿ ಮೂವತ್ತು ಕೋಟಿ ರೂಪಾಯಿ ಮೊತ್ತದ ಚೆಕ್ ಬಿಎಂಆರ್‌ಸಿಎಲ್‍ಗೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ:  ಸುಧಾಮೂರ್ತಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಮಿತಾಬ್ ಬಚ್ಚನ್

ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅನುದಾನದ ಅಡಿಯಲ್ಲಿ ನಿಲ್ದಾಣ ನಿರ್ಮಾಣಕ್ಕೆ ನೂರು ಕೋಟಿ ರೂ. ಅನುದಾನ ನೀಡುವ ಕುರಿತು ಕಳೆದ ವರ್ಷ ಇನ್ಫೋಸಿಸ್ ಬಿಎಂಆರ್‌ಸಿಎಲ್ ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಸುಧಾಮೂರ್ತಿ ಅವರು ಈ ಹಿಂದೆ ಹತ್ತು ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದರು. ಈಗ ಮತ್ತೆ 30 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದಾರೆ. ಕೇವಲ ನೂರು ಕೋಟಿ ದೇಣಿಗೆ ನೀಡುವುದಷ್ಟೇ ಅಲ್ಲದೆ ಮುಂದಿನ ಮೂವತ್ತು ವರ್ಷಗಳ ಕಾಲ ನಿಲ್ದಾಣದ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ಇನ್ಫೋಸಿಸ್ ಪ್ರತಿಷ್ಠಾನ ವಹಿಸಿಕೊಂಡಿದೆ. ಒಪ್ಪಂದದ ಪ್ರಕಾರ ನಿಲ್ದಾಣದ ಸಿವಿಲ್ ಕಾಮಗಾರಿ ಪೂರ್ಣಗೊಂಡ ನಂತರ ಮೂವತ್ತು ಕೋಟಿ ರೂ. ಮತ್ತು ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ನಂತರ 30 ಕೋಟಿ ರೂ. ಇನ್ಫೋಸಿಸ್ ಪ್ರತಿಷ್ಠಾನ ನೀಡುವುದಾಗಿ ತಿಳಿಸಿದೆ. ಇದನ್ನೂ ಓದಿ: ಪ್ರಾಂಶುಪಾಲರ ಮೂರು ಷರತ್ತು ಒಪ್ಪಿ ಎಂಜಿನಿಯರಿಂಗ್ ಸೇರಿದ್ದ ಸುಧಾಮೂರ್ತಿ

Comments

Leave a Reply

Your email address will not be published. Required fields are marked *