ಭಾರತ ಪವಿತ್ರ ಭೂಮಿಯೆಂದು ಚಪ್ಪಲಿ ಹಾಕದೇ ಓಡಾಡ್ತಿದ್ದಾರೆ ವಿದೇಶಿ ಪ್ರಜೆ

ಬೆಂಗಳೂರು: ಶಿಸ್ತು, ಶಾಂತಿಗೆ ಇನ್ನೊಂದು ಹೆಸರೇ ಕರ್ನಾಟಕ ಪೊಲೀಸ್ ಎನ್ನುವ ಹೆಸರಿದೆ. ಆದರೂ ಜನಸಾಮಾನ್ಯರಲ್ಲಿ, ಪೊಲೀಸ್ ಬಗ್ಗೆ ಇರುವ ಅಭಿಪ್ರಾಯವೇ ಬೇರೆ. ಇದರ ನಡುವೆಯೂ ಹೆಡ್ ಕಾನ್ಸ್ ಸ್ಟೇಬಲ್ ವಿದೇಶಿಗನೊಬ್ಬನ ನೋವಿಗೆ ಸ್ಪಂದಿಸಿದ ಅಪರೂಪದ ಘಟನೆ ನಡೆದಿದೆ.

25 ವರ್ಷದ ಇಸ್ರೇಲ್ ರೈತ ಯೀಡೋ ಕಳೆದ ನವೆಂಬರ್ 24ರಂದು ಸೌಂದರ್ಯ ಸವಿಯುವ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದರು. ನಗರದ ಕಬ್ಬನ್ ಪಾರ್ಕಿನ ತಂಪಾದ ಗಾಳಿಗೆ ಮೈಮರೆತು ಮಲಗಿದ್ದಾಗ, ಅವರ ಬಳಿಯಿದ್ದ 20 ಸಾವಿರ ರೂ. ಹಣ, ಐಫೋನ್, ಶ್ರೀಲಂಕಾ ಏರ್ ಇ- ಟಿಕೆಟ್, ಬಟ್ಟೆ ಬ್ಯಾಗ್ ಗಳನ್ನು ಕಳ್ಳರು ಕದ್ದಿದ್ದಾರೆ. ನಂತರ ಹಸಿದ ಹೊಟ್ಟೆಯಲ್ಲೇ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್‍ಗೆ ಬಂದು ದೂರು ನೀಡಿದ್ದಾರೆ. ಆಗ ದೂರು ಸ್ವೀಕರಿಸಿದ ಮುಖ್ಯಪೇದೆ ಅತೀಕ್ ಅಹ್ಮದ್ ನೆರವಿನ ಹಸ್ತ ಚಾಚಿದ್ದಾರೆ.

ಅದೃಷ್ಟವಶಾತ್ ಯೀಡೋ ಬರ್ಮುಡಾದ ಜೇಬಿನಲ್ಲಿ ಪಾಸ್‍ಪೋರ್ಟ್ ಹಾಗೂ ವೀಸಾ ಮಾತ್ರ ಸೇಫ್ ಆಗಿತ್ತು. ಈ ನೋವನ್ನು ಆಲಿಸಿದ ಪೊಲೀಸರು ಸಹಾಯ ಮಾಡಲು ನಿರ್ಧರಿಸಿ, ಡೂಪ್ಲಿಕೇಟ್ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದಾರೆ. ಅದು ಸಾಧ್ಯವಾಗದಿದ್ದಾಗ, ಬೆಂಗಳೂರು ವಿಮಾನ ನಿಲ್ದಾಣ ಪೊಲೀಸರ ಸಹಾಯದಿಂದ ಶ್ರೀಲಂಕಾ, ಪಾಂಡಿಚೇರಿ ತಲುಪಿಸಿದ್ದಾರೆ. ಹೋಗುವಾಗ ಮುಖ್ಯಪೇದೆ ಅತೀಕ್ 1,500 ರೂ. ಕೊಟ್ಟಿದ್ದಾರೆ. ನಂತರ ಯೀಡೋ ಇಸ್ರೇಲ್ ತಲುಪಿದ್ದು, ಗುರುವಾರ ಮತ್ತೆ ಬೆಂಗಳೂರಿಗೆ ಯೀಡೋ ವಾಪಾಸ್ ಬಂದು ಅತೀಕ್ ಗೆ ಹಣ ತಲುಪಿಸಿದ್ದಾರೆ. ಮುಖ್ಯ ಪೇದೆ ಈ ಮಾನವೀಯತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಯೀಡೋ ಭಾರತವನ್ನು ಪವಿತ್ರ ಭೂಮಿಯಂತೆ ಪೂಜಿಸಿ, ಇಲ್ಲಿ ಕಾಲಿಗೆ ಚಪ್ಪಲಿ ಹಾಕದೇ ಓಡಾಡಿದ್ದಾರೆ. ಮಾಂಸಹಾರ ತ್ಯಜಿಸಿದ್ದಾರೆ.

Comments

Leave a Reply

Your email address will not be published. Required fields are marked *