ಅಯೋಧ್ಯೆಯಲ್ಲಿ ಮಸೀದಿಯಾದ್ರೆ ಭಾರತ ಮತ್ತೊಂದು ಮೆಕ್ಕಾ ಆಗುತ್ತೆ- ನಿಶ್ಚಲಾನಂದ ಸ್ವಾಮೀಜಿ

ಉಡುಪಿ: ಅಯೋಧ್ಯೆ ರಾಮ ಜನ್ಮಭೂಮಿ ತೀರ್ಪಿನ ನಂತರ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಪುರಿ ಶಂಕರಾಚಾರ್ಯ ಪೀಠ ನಿಶ್ಚಲಾನಂದ ಸ್ವಾಮೀಜಿ ಮೊತ್ತ ಮೊದಲಬಾರಿಗೆ ಭೇಟಿಯಾಗಿ ಬಿಸಿ ಬಿಸಿ ಚರ್ಚೆ ನಡೆಸಿದ್ದಾರೆ. ಉಡುಪಿ ಪೇಜಾವರ ಮಠದಲ್ಲಿ ಇಬ್ಬರ ಯತಿಗಳ ಮುಖಾಮುಖಿ ಆಗಿದೆ.

ಪುರಿ ಶ್ರೀ ನಿಶ್ಚಲಾನಂದ ಸ್ವಾಮೀಜಿ ಅಯೋಧ್ಯೆ ತೀರ್ಪಿನ ಬಗ್ಗೆ ಅಸಮಾಧಾನ ಹೊರ ಹಾಕಿದರು. ಅಯೋಧ್ಯೆಯಲ್ಲಿ ಮುಸ್ಲಿಮರಿಗೆ ಒಂದಿಂಚೂ ಭೂಮಿ ನೀಡಬಾರದು. ಅಯೋಧ್ಯೆಯನ್ನು ಮುಸಲ್ಮಾನರು ಮತ್ತೊಂದು ಮೆಕ್ಕಾ ಮಾಡಲು ತಯಾರಿ ನಡೆಸುತ್ತಾರೆ ನೋಡುತ್ತಿರಿ ಎಂದು ಪೇಜಾವರಶ್ರೀ ಮುಂದೆ ಕೋಪ ಹೊರಹಾಕಿದರು. ಸುಪ್ರೀಂಕೋರ್ಟ್ ಗಿಂತ ಪಾರ್ಲಿಮೆಂಟ್ ದೊಡ್ಡದು. ಪಾರ್ಲಿಮೆಂಟ್‍ನಲ್ಲಿ ಬಿಜೆಪಿಗೆ ಬಹುಮತ ಇದೆ. ಸುಪ್ರೀಂಕೋರ್ಟ್ ತೀರ್ಪನ್ನು ರದ್ದು ಮಾಡಲಿ ಎಂದರು. ಇದನ್ನೂ ಓದಿ:ಅಯೋಧ್ಯೆ ರಾಮನಿಗೆ ಸಿಗಲು ‘ಸ್ಕಂದ’ ಕಾರಣ

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣವಾಗದಂತೆ ಬಿಜೆಪಿ ಸರ್ಕಾರ ನೋಡಿಕೊಳ್ಳಲಿ ಎಂದು ಪುರಿ ಶ್ರೀಗಳು ತಾಕೀತು ಮಾಡಿದರು. ಧಾರ್ಮಿಕ ವಿಚಾರದಲ್ಲಿ ಸಂತರೇ ಸುಪ್ರೀಂ. ದೇಶದ ಸರ್ವೋಚ್ಚ ನ್ಯಾಯಾಲಯ ಯಾಕೆ ನಿರ್ಧಾರ ತೆಗೆದುಕೊಳ್ಳಬೇಕು? ಸೆಕ್ಯೂಲರ್ ಸಂವಿಧಾನವನ್ನು ನಾನು ಒಪ್ಪುವುದಿಲ್ಲ ಎಂದು ಗರಂ ಆಗಿ ನುಡಿದರು. ಇದನ್ನೂ ಓದಿ: ಅಯೋಧ್ಯೆ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರಲು ಸುನ್ನಿ ವಕ್ಫ್ ಬೋರ್ಡ್ ನಿರ್ಧಾರ

ಭಾರತದಲ್ಲಿ ರಾಮನಿಗೆ ಅಧಿಕಾರ ಇಲ್ವಾ?
ವಿಭಜಿತ ಭಾರತದಲ್ಲಿ ರಾಮ ಜನ್ಮಭೂಮಿಯ ಮೇಲಾದರೂ ನಮಗೆ ಪೂರ್ಣ ಅಧಿಕಾರ ಸಿಗಲಿ. ರಾಮ ಹುಟ್ಟಿದ ಭಾರತದಲ್ಲೇ ರಾಮಮಂದಿರಕ್ಕಾಗಿ ಇಷ್ಟು ವರ್ಷ ಕಾಯಬೇಕಾ? ನಮ್ಮ ಮಂದಿರಕ್ಕಾಗಿ ದೇಶದಲ್ಲಿ ಇಷ್ಟೊಂದು ಕ್ಲಿಷ್ಟಕರ ವಾತಾವರಣವೇ ಎಂದು ಅಸಮಾಧಾನ ವ್ಯಕ್ತ ಮಾಡಿದರು. ಇದು ಭಾರತವನ್ನು ಇನ್ನೊಂದು ಮೆಕ್ಕಾ ಮಾಡುವ ಷಡ್ಯಂತ್ರ. ನಮ್ಮ ಉದಾರತೆ ದೌರ್ಬಲ್ಯ ಆಗಬಾರದು ಎಂದು ಸಲಹೆ ನೀಡಿದರು.

ಬಿಜೆಪಿಗೆ ಚಾಟಿ ಬೀಸಿದ ನಿಶ್ಚಲಾನಂದ ಶ್ರೀ:
ಆಡಳಿತ ದುರಾಸೆ ಇಲ್ಲದ ಯಾವುದೇ ರಾಜಕೀಯ ಪಕ್ಷ ಈ ದೇಶದಲ್ಲಿ ಇಲ್ಲ ಎಂದು ಬಿಜೆಪಿಗೆ ಸರಿಯಾಗಿಯೇ ಚಾಟಿ ಬೀಸಿ, ಮಹಾರಾಷ್ಟ್ರ, ಗೋವಾ, ಜಮ್ಮು ಕಾಶ್ಮೀರದ ಲ್ಲಿ ಬಿಜೆಪಿಯ ಅಧಿಕಾರದ ಲಾಲಸೆಯ ಉದಾಹರಣೆ ನೀಡಿದರು. ಸಂತರು ಕೂಡ ರಾಜಕಾರಣಿಗಳನ್ನು ಅನುಸರಿಸುತ್ತರುವುದು ಶೋಚನೀಯ ಎಂದು ಮಠಾಧೀಶರ ರಾಜಕೀಯ ಆಸಕ್ತಿ ಬಗ್ಗೆ ಪ್ರಸ್ತಾಪಿಸಿ ವಿರೋಧಿಸಿದರು. ಅಯೋಧ್ಯೆಯಲ್ಲಿ ಒಂದಿಂಚು ಭೂಮಿ ಮುಸ್ಲಿಮರಿಗೆ ನೀಡುವುದಕ್ಕೆ ನನ್ನ ಸಹಮತ ಇಲ್ಲ ಎಂದರು.

ಮುಸ್ಲಿಂ ನಾಯಕರಿಗೆ ರಾಷ್ಟ್ರದ ಉನ್ನತ ಹುದ್ದೆಗಳನ್ನು ನೀಡಿದ್ದೇವೆ. ರಾಷ್ಟ್ರಪತಿ, ಗೃಹ ಸಚಿವ, ಸುಪ್ರೀಂಕೋರ್ಟ್ ನ ನ್ಯಾಯಾಧೀಶ ಪಟ್ಟ ಸಿಕ್ಕಿದೆ. ಅಯೋಧ್ಯೆಯ ಭೂಮಿಯನ್ನೂ ಕೊಟ್ಟಿರುವುದು ಎಷ್ಟು ಸರಿ ಎಂದು ಪೇಜಾವರಶ್ರೀ ಗಳನ್ನು ಪ್ರಶ್ನೆ ಮಾಡಿದರು. ಮಸೀದಿ ಅಲ್ಲಿ ಆಗಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳು ಹೇಳುತ್ತವೆ. ನಿಮ್ಮಂತಹ ವೀರ ಸಂತರು ಹಿಂದೂ ಧರ್ಮ ದುರ್ಬಲವಾಗದಂತೆ ನೋಡಿಕೊಳ್ಳಬೇಕು ಎಂದು ಪುರಿ ನಿಶ್ಚಲಾನಂದ ಶ್ರೀ ಕೋರಿಕೆ ವ್ಯಕ್ತಪಡಿಸಿದರು. ಸಮಾಲೋಚನೆ ಉದ್ದಕ್ಕೂ ಪೇಜಾವರಶ್ರೀ ಸಮಾನತೆ, ಸಂವಿಧಾನ ಸಹಬಾಳ್ವೆ ಮತ್ತು ಏಕತೆಯ ಮಂತ್ರ ಜಪಿಸಿದರೂ ಪುರಿಶ್ರೀ ಅದಕ್ಕೆ ಧನಿಗೂಡಿಸದೆ ತಮ್ಮದೇ ವಾದ ಮಂಡಿಸಿ ತೆರಳಿದರು.

Comments

Leave a Reply

Your email address will not be published. Required fields are marked *