ಬಿಎಸ್‍ವೈಯನ್ನು ಎತ್ತಾಕುವ ವಿದ್ಯೆಯನ್ನು ಅಪ್ಪ, ಮಗ ಕಲಿತಿದ್ದಾರೆ – ಆಯನೂರು ವಾಗ್ದಾಳಿ

ದಾವಣಗೆರೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಎತ್ತಾಕುವ ಹಲಕುತನದ ವಿದ್ಯೆಯನ್ನು ಅಪ್ಪ, ಮಗ ಹೆಣೆದಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ವಿರುದ್ಧ ಬಿಜೆಪಿ ವಿಧಾನಪರಿಷತ್ ಸದಸ್ಯ ಅಯನೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ನಡೆದ ಶಾಸಕ ಎಸ್.ಎ.ರವೀಂದ್ರನಾಥ್ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್‍ನವರು ಒಂದು ಕಡೆ ಯಡಿಯೂರಪ್ಪನವರ ಸರ್ಕಾರ ಬೀಳಲು ಬಿಡುವುದಿಲ್ಲ ಎನ್ನುತ್ತಿದ್ದಾರೆ. ಇನ್ನೊಂದೆಡೆ ಅನರ್ಹ ಶಾಸಕರನ್ನು ಸೋಲಿಸುವುದೇ ನಮ್ಮ ಗುರಿ ಎನ್ನುತ್ತಾರೆ. ಅನರ್ಹ ಶಾಸಕರು ಸೋತರೆ ಸರ್ಕಾರ ಹೇಗೆ ಉಳಿಯುತ್ತದೆ ಎಂದು ಪ್ರಶ್ನಿಸಿದ್ದಾರೆ.

ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತರೆ ಇವರೇ ಬೆನ್ನ ಮೇಲೆ ಯಡಿಯೂರಪ್ಪ ನವರನ್ನು ಕೂರಿಸಿಕೊಳ್ಳಬೇಕು ಎನ್ನುವ ತಂತ್ರ ರೂಪಿಸಿದ್ದಾರೆ. ಹಿಂದಿನ ಬಾರಿ ಎತ್ತಾಕಿದರಲ್ಲ, ಅದೇ ರೀತಿ ಈಗಲೂ ಅದನ್ನೇ ಮಾಡಲು ಹೊರಟಿದ್ದಾರೆ. ಇಂಥ ಎತ್ತಾಕುವಂತಹ ಹಲುಕತನದ ವಿದ್ಯೆಯನ್ನು ಅಪ್ಪ ಮಗ ಹೆಣಿದಿದ್ದಾರೆ ಎಂದು ಕಿಡಿ ಕಾರಿದರು.

ಉಪ ಚುನಾವಣೆಯಲ್ಲಿ ಬಿಜೆಪಿ ಖಚಿತವಾಗಿ ಗೆಲುವು ಸಾಧಿಸುತ್ತದೆ, ಈ ಕಾರಣಕ್ಕಾಗಿ ಜೆಡಿಎಸ್ ಬಿಜೆಪಿಯನ್ನು ಸಮರ್ಥಸಿಕೊಂಡು ಬರುತ್ತಿದ್ದಾರೆ. ಆದರೆ ಜನರಿಗೆ ಇದೆಲ್ಲ ಗೊತ್ತಿದೆ. ಬಿಜೆಪಿಯನ್ನು ಸೋಲಿಸಲು ಬಿಡುವುದಿಲ್ಲ. ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದು, ಸರ್ಕಾರ ಮುಂದುವರಿಯುತ್ತದೆ. ಯಡಿಯೂರಪ್ಪನವರ ನೇತೃತ್ವದಲ್ಲಿ 15ಕ್ಕೆ 15 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *