ಪೊಲೀಸ್ ಸಮವಸ್ತ್ರ ಧರಿಸಿ ದರೋಡೆಗೆ ಇಳಿಯುತ್ತಿದ್ದ ನಾಲ್ವರು ಖದೀಮರು ಅರೆಸ್ಟ್

ಕೋಲಾರ: ಪೊಲೀಸ್ ಸಮವಸ್ತ್ರ ಧರಿಸಿ ರಾತ್ರಿ ದರೋಡೆ ಮಾಡುತ್ತಿದ್ದ ನಾಲ್ವರು ಖದೀಮರನ್ನು ಬೆಂಗಳೂರು ಹೊರ ವಲಯದ ಮಾಲೂರು ಪೊಲೀಸರು ಬಂಧಿಸಿದ್ದಾರೆ.

ಬಂಗಾರಪೇಟೆ ಮೂಲದ ಅನಿಲ್ ಕುಮಾರ್ (32), ಶೇಷಾದ್ರಿ (21), ರಾಬಿನ್ (21) ಹಾಗೂ ಶಬ್ಬೀರ್ (20) ಬಂಧಿತ ಆರೋಪಿಗಳು. ದರೋಡೆಗೆ ಹೊಂಚು ಹಾಕುತ್ತಿದ್ದಾಗಲೇ ಪೊಲೀಸರು ಆರೋಪಿಗಳನ್ನು ಬಂಧಿಸಿ, ಠಾಣೆಗೆ ಕರೆದೊಯ್ದಿದ್ದಾರೆ.

ಆರೋಪಿಗಳು ತಮ್ಮ ಬೈಕ್‍ಗಳಿಗೆ ಪೊಲೀಸ್ ಎಂಬ ಸ್ಟಿಕ್ಕರ್ ಅಂಟಿಸಿಕೊಂಡು, ಖಾಕಿ ಬಟ್ಟೆ ಇಟ್ಟುಕೊಂಡು ಮಾಲೂರು ತಾಲೂಕಿನ ವಿವಿಧೆಡೆ ದರೋಡೆ ಮಾಡುತ್ತಿದ್ದರು. ಈ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಕೆಲ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇಲಾಖೆಯ ಗೌರವ ಹಾಳು ಮಾಡುತ್ತಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.

ಮಾಲೂರು ಕೈಗಾರಿಕಾ ಪ್ರದೇಶದ ಕೂರಂಡಹಳ್ಳಿ ಬಳಿ ಆರೋಪಿಗಳು ದರೋಡೆಗೆ ಹೊಂಚು ಹಾಕುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ತಂಡ ರೂಪಿಸಿ ಆರೋಪಿಗಳನ್ನು ಬಂಧಿಸಿ, ಠಾಣೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *