ಧರ್ಮ ಸಂಕಟದಲ್ಲಿ ಸುಮಲತಾ ಅಂಬರೀಶ್

ಬೆಂಗಳೂರು: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಸಂಸದೆ ಸುಮಲತಾ ಅಂಬರೀಶ್ ಯಾರಿಗೆ ಬೆಂಬಲ ನೀಡ್ತಾರೆ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇರವಾಗಿ ಸುಮಲತಾರಿಗೆ ಬೆಂಬಲ ನೀಡಿತ್ತು. ಇತ್ತ ಕಾಂಗ್ರೆಸ್‍ನಲ್ಲಿದ್ದ ಚಲುವರಾಯಸ್ವಾಮಿ & ಟೀಂ ಸಹ ಪರೋಕ್ಷವಾಗಿ ಬೆಂಬಲ ನೀಡಿತ್ತು. ಹೀಗಾಗಿ ಯಾರಿಗೆ ಬೆಂಬಲ ನೀಡಬೇಕು ಎಂದು ಸುಮಲತಾ ಅಂಬರೀಶ್ ಧರ್ಮಸಂಕಟದಲ್ಲಿದ್ದಾರೆ ಎನ್ನಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹಾಕದೇ ಸಂಪೂರ್ಣ ಬೆಂಬಲ ನೀಡಿತ್ತು. ಅಂದು ನಾವು ಬೆಂಬಲಿಸಿದ್ದೀವಿ, ಇಂದು ನೀವು ಬೆಂಬಲಿಸಿ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಮತ್ತೊಂದು ಕಡೆ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಅವರಿಗೆ ಬೆಂಬಲ ನೀಡಬೇಕೆಂದು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ನವೆಂಬರ್ 24ರಂದು ಅಂಬರೀಶ್ ಅವರ ಮೊದಲ ಪುಣ್ಯಸ್ಮರಣೆಯ ದಿನವೇ ನಿರ್ಧಾರವನ್ನು ತಿಳಿಸಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಬಿಗಿಪಟ್ಟು ಹಿಡಿದಿವೆಯಂತೆ. ಹೀಗಾಗಿ ಸುಮಲತಾ ಅಂಬರೀಶ್ ಆಪ್ತ ಬೆಂಬಲಿಗರ ಸಭೆ ಕರೆದು ಚರ್ಚಿಸಿ ನವೆಂಬರ್ 24ರಂದು ತಮ್ಮ ನಿರ್ಧಾರವನ್ನು ತಿಳಿಸುವ ಸಾಧ್ಯತೆಗಳಿವೆ.

ಕೆಲವು ದಿನಗಳ ಹಿಂದೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಮಲತಾ ಅಂಬರೀಶ್, ಅಭಿಮಾನಿಗಳು ಒತ್ತಾಯಿಸಿದ್ದರಿಂದ ಚುನಾವಣೆಗೆ ನಿಂತೆ. ನನಗಿಂತ ಅವರೇ ಓಡಾಡಿ ಚುನಾವಣೆಯಲ್ಲಿ ಗೆಲ್ಲಿಸಿದರು. ಉಪಚುನಾವಣೆಯಲ್ಲಿ ಪಕ್ಷೇತರ ಸಂಸದೆಯಾಗಿರುವ ನಾನು ಯಾರನ್ನಾದರನ್ನ ಬೆಂಬಲಿಸಬೇಕಾ ಅಥವಾ ತಟಸ್ಥವಾಗಿರಬೇಕಾ ಎಂಬುದನ್ನು ಅವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *