ಹಿಂದೂ-ಮುಸ್ಲಿಮರು ಅಣ್ಣ ತಮ್ಮಂದಿರಂತೆ, 5 ಶತಮಾನದ ಹೋರಾಟ ಅಂತ್ಯ – ಕರಂದ್ಲಾಜೆ

ಬೆಂಗಳೂರು: ಐದು ಶತಮಾನದ ಹೋರಾಟ ಇಂದು ಅಂತ್ಯವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಅವರು, ಶ್ರೀರಾಮ ಹುಟ್ಟಿದ ಜಾಗದಲ್ಲಿ ಮಂದಿರ ಆಗಬೇಕು ಎನ್ನವ ಹೋರಾಟ ಇತ್ತು. ಐದು ಶತಮಾನದ ಹೋರಾಟ ಇದು. ಶ್ರೀರಾಮ ಹುಟ್ಟಿದ ಜಾಗದಲ್ಲಿ ಮಂದಿರ ಆಗಬೇಕು ಎಂಬ ಹೋರಾಟ ಇತ್ತು. ಜನ ಚಾತಕ ಪಕ್ಷಿಯಂತೆ ಈ ದಿನಕ್ಕಾಗಿ ಕಾಯುತ್ತಿದ್ದರು. ಇದೊಂದು ಐತಿಹಾಸಿಕ ತೀರ್ಪು. ಹಿಂದೂಗಳಿಗೆ ಜಾಗ ಬಿಟ್ಟುಕೊಡುವ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ ಎಂದರು.

ಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ. ರಾಜ್ಯದ ಜನ ಶಾಂತಿಯಿಂದ ವರ್ತನೆ ಮಾಡಬೇಕು. ಎರಡು ಕೋಮಿನ ಜನ ಒಟ್ಟಾಗಿ ಬದುಕಬೇಕು. ಮಸೀದಿಗೂ ಜಾಗ ನೀಡಿ ಎಂದು ಕೋರ್ಟ್ ಹೇಳಿದೆ. ಹೀಗಾಗಿ ಒಟ್ಟಾಗಿ ನಾವು ಶಾಂತಿ ಸೌಹಾರ್ದತೆಯಿಂದ ನಡೆದುಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ಲಕ್ಷಾಂತರ ಜನ ರಾಮನ ಮಂದಿರ ಹೋರಾಟಕ್ಕಾಗಿ ಪ್ರಾಣ ತೆತ್ತಿದ್ದರು. ರಾಮ ಮಂದಿರಕ್ಕೆ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ದೇಶದಲ್ಲಿ ನ್ಯಾಯ ಇದೆ ಎನ್ನುವುದು ತೀರ್ಪಿನಿಂದ ಸಾಬೀತಾಗಿದೆ. ಜಾಗ ಹಿಂದೂಗಳಿಗೆ ಬಿಟ್ಟು ಕೊಡುವ ಐತಿಹಾಸಿಕ ತೀರ್ಪು ಕೋರ್ಟ್ ನೀಡಿದೆ. ಹಿಂದೂ-ಮುಸ್ಲಿಮರು ಅಣ್ಣ ತಮ್ಮಂದಿರು ಇದ್ದ ಹಾಗೆ. ಹಿಂದೂ-ಮುಸ್ಲಿಮರು ಒಟ್ಟಾಗಿ ಪ್ರೀತಿ ವಿಶ್ವಾಸದಿಂದ ಬದುಕೋಣ ಎಂದು ಕರೆ ನೀಡಿದರು.

ಮೂರು ತಿಂಗಳಲ್ಲಿ ಮಸೀದಿಗೆ ಜಾಗ ಕೊಡಬೇಕು ಎಂದು ಕೋರ್ಟ್ ಹೇಳಿದೆ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ದೇಶದ, ರಾಜ್ಯದ ಜನ ಶಾಂತಿ, ಸೌಹಾರ್ದಯುತವಾಗಿ ಇರಬೇಕು ಎಂದರು.

Comments

Leave a Reply

Your email address will not be published. Required fields are marked *