ಮಂಡ್ಯದಲ್ಲಿ ಕುಡಿಯೋ ನೀರಿನಲ್ಲೂ ರಾಜಕೀಯ!

– ಕೈ-ದಳ ನಡುವೆ ತಿಕ್ಕಾಟ

ಮಂಡ್ಯ: ಜಿಲ್ಲೆಯಲ್ಲಿ ಕುಡಿಯುವ ನೀರಿನಲ್ಲೂ ರಾಜಕೀಯ ಶುರುವಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತಿಕ್ಕಾಟ ನಡೆಯುತ್ತಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗೆ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಅಡ್ಡಿಯುಂಟು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಾಗಮಂಗಲ-ಕುಣಿಗಲ್ ಗಡಿಯ ಮಾರ್ಕೋನಹಳ್ಳಿ ಡ್ಯಾಂ ನಿಂದ ನೀರು ಪೂರೈಸುವ ಯೋಜನೆ ಇದಾಗಿದೆ. ಇದರ ಶೇ.95 ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ಹಂತದಲ್ಲಿ ಯೋಜನೆಗೆ ಕೈ ಶಾಸಕ ಅಡ್ಡಿಪಡಿಸಿದ್ದಾರೆ. ನೀರು ಪಂಪ್ ಮಾಡುವ ಜಾಕ್‍ವೆಲ್ ಅಳವಡಿಕೆಯಿಂದ ಡ್ಯಾಂಗೆ ಅಪಾಯವೆಂಬ ನೆಪವೊಡ್ಡಿದ್ದಾರೆ.

168 ಕೋಟಿ ರೂ. ವೆಚ್ಚದ 128 ಗ್ರಾಮ, ಆದಿಚುಂಚನಗಿರಿ ಕ್ಷೇತ್ರಕ್ಕೆ ನೀರು ಪೂರೈಸುವ ಯೋಜನೆ ಜಾಕ್‍ವೆಲ್ ಅಳವಡಿಸೋದಾದ್ರೆ ನನ್ನ ಸಮಾಧಿ ಮೇಲೆ ಅಳವಡಿಸಿ ಎಂದು ರಂಗನಾಥ್ ಸವಾಲು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಮಂಡ್ಯ ಡಿಸಿ, ತುಮಕೂರು ಎಡಿಸಿ ನೇತೃತ್ವದಲ್ಲಿ ಮಾರ್ಕೋನಹಳ್ಳಿ ಡ್ಯಾಂ ಬಳಿ ನಡೆದ ಸಂಧಾನ ಯತ್ನವೂ ವಿಫಲವಾಗಿದೆ.

ಸಭೆಯಲ್ಲಿ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ, ಕುಣಿಗಲ್ ಶಾಸಕ ರಂಗನಾಥ್ ಭಾಗಿಯಾಗಿದ್ದಾರೆ. ತಾಂತ್ರಿಕ ದೋಷ ಇಲ್ಲ, ಜಾಕ್ ವೆಲ್ ನಿಂದ ಅಣೆಕಟ್ಟೆಗೆ ಅಪಾಯವಿಲ್ಲ ಅಧಿಕಾರಿಗಳು ತಿಳಿಸಿದರು. ತಾಂತ್ರಿಕ ದೋಷ ಇಲ್ಲ ಎನ್ನುತ್ತಿದ್ದಂತೆ ಕುಣಿಗಲ್ ತಾಲೂಕಿಗೆ ನೀರಿಲ್ಲ. ಎಲ್ಲಿಂದ ನಿಮಗೆ ನೀರು ಕೊಡೋದು ಎಂದು ರಂಗನಾಥ್ ತಮ್ಮ ವರಸೆ ಬದಲಿಸಿದ ಪ್ರಸಂಗವೂ ನಡೆಯಿತು. ಅಂತಿಮವಾಗಿ ಸಂಸದರು, ಕ್ಷೇತ್ರದ ಮುಖಂಡರ ಜತೆ ಚರ್ಚಿಸುವುದಾಗಿ ಹೇಳಿ ರಂಗನಾಥ್ ಸಭೆಯಿಂದ ನಿರ್ಗಮಿಸಿದರು.

ನನ್ನ ಕ್ಷೇತ್ರದಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಮಾಡಿಯೇ ತೀರುತ್ತೇವೆಂದು ಇತ್ತ ನಾಗಮಂಗಲ ಶಾಸಕ ಸವಾಲು ಹಾಕಿದರು. ಗೌರವ ಕೊಡಬೇಕಿತ್ತು ಕೊಟ್ಟಿದ್ದೇವೆ. ಆದರೆ ಕಾಮಗಾರಿ ನಿಲ್ಲಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Comments

Leave a Reply

Your email address will not be published. Required fields are marked *