ಅವ್ಯವಸ್ಥೆಯ ಆಗರ ರಿಮ್ಸ್ ಆಸ್ಪತ್ರೆಯಲ್ಲಿ ರಾಮುಲು ವಾಸ್ತವ್ಯ

ರಾಯಚೂರು: ಆರೋಗ್ಯ ಸಚಿವ ಶ್ರೀರಾಮುಲು ಇಂದು ರಾಯಚೂರಿನ ರಿಮ್ಸ್ ಆಸ್ಪತ್ರೆ ಪರಿಶೀಲಿಸಿ ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಶ್ರೀರಾಮುಲು ರಿಮ್ಸ್ ನ ಕರ್ತವ್ಯ ನಿರತ ವೈದ್ಯರ ಕೊಠಡಿಯಲ್ಲಿ ತಂಗಲಿದ್ದಾರೆ. ಹೀಗಾಗಿ ಇಡೀ ಆಸ್ಪತ್ರೆಯನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ ಸಚಿವರ ವಾಸ್ತವ್ಯಕ್ಕೆ ಸಕಲ ಸಿದ್ಧತೆಗಳನ್ನು ಮಾಡುತ್ತಿದೆ.

ಮಂತ್ರಿಗಳ ವಾಸ್ತವ್ಯದಿಂದ ಅದೆಷ್ಟೋ ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಸಿಗದಿದ್ದ ಕುಡಿಯುವ ನೀರು ಈಗ ದೊರೆಯುತ್ತಿದೆ. ಅಲ್ಲಲ್ಲಿ ಸುಣ್ಣ ಬಣ್ಣಗಳನ್ನು ಬಳಿದು ಆಸ್ಪತ್ರೆಯ ಅವ್ಯವಸ್ಥೆಗಳನ್ನು ಸರಿಮಾಡಲು ಸಿಬ್ಬಂದಿ ಪರದಾಡುತ್ತಿದ್ದಾರೆ. ಆದರೆ ರೋಗಿಗಳ ಕಷ್ಟಗಳು ಮಾತ್ರ ತೀರಿಲ್ಲ. ಹಾವು ಕಡಿತಕ್ಕೆ ಔಷಧಿಯಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಔಷಧಿ ಇಲ್ಲ ಎಂದು ಹೊರಗಡೆ ತರಲು ವೈದ್ಯರು ಹೇಳುತ್ತಿದ್ದಾರೆ ಎಂದು ರೋಗಿಗಳ ಕಡೆಯವರು ಆರೋಪಿಸಿದ್ದಾರೆ. ಬೆಡ್ ವ್ಯವಸ್ಥೆಯಿಲ್ಲದೆ ಕೆಲ ರೋಗಿಗಳು ಕಾರಿಡಾರ್ ನಲ್ಲೆ ಕಾಲಕಳೆಯುತ್ತಿದ್ದಾರೆ. ಕನಿಷ್ಠ ಆರೋಗ್ಯ ಸಚಿವರು ಬಂದು ಹೋದಮೇಲಾದರೂ ಇಲ್ಲಿನ ವ್ಯವಸ್ಥೆಗಳು ಬದಲಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *