ಬಂಪರ್ ಬಹುಮಾನ – 23.18 ಕೋಟಿ ರೂ. ಲಾಟರಿ ಗೆದ್ದ ಸುಳ್ಯದ ಯುವಕ

ಅಬುಧಾಬಿ: ಸುಳ್ಯ ಮೂಲದ ವ್ಯಕ್ತಿಯೊಬ್ಬರು 12 ದಶಲಕ್ಷ ದಿರ್ಹಾಮ್(23.18 ಕೋಟಿ ರೂ.) ಅಬುಧಾಬಿ ಲಾಟರಿ ಗೆದ್ದು ಸುದ್ದಿಯಾಗಿದ್ದಾರೆ.

24 ವರ್ಷದ ಮೊಹಮ್ಮದ್ ಫಯಾಜ್ ಜೆ.ಎ. ಮೂಲತಃ ವಾಣಿಜ್ಯ ನಗರಿ ಮುಂಬೈನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ವೇಳೆ ರೂಮ್‍ಮೇಟ್ ಜೊತೆ ಲಾಟರಿ ಖರೀದಿಸಲು ಪ್ರಾರಂಭಿಸಿದ್ದರು. ಲಾಟರಿ ಖರೀದಿಸಲು ಪ್ರಾರಂಭಿಸಿ ಕೇವಲ ಆರು ತಿಂಗಳಾಗಿತ್ತು. ಸತತ ಪ್ರಯತ್ನದಿಂದ ಅಬುಧಾಬಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಬಿಗ್ ಟಿಕೆಟ್ ರಾಫೆಲ್ ಡ್ರಾದಲ್ಲಿ 23.18 ಕೋಟಿ ರೂ. ಗೆದ್ದಿದ್ದಾರೆ. ಇದನ್ನೂ ಓದಿ: ಲಾಟರಿ ಬಂಪರ್ – ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಸುಳ್ಯದ ವ್ಯಕ್ತಿ!

ಫಯಾಜ್ ಚಿಕ್ಕ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡಿದ್ದಾರೆ. ಇವರಿಗೆ ಒಬ್ಬ ಸಹೋದರ, ಇಬ್ಬರು ಸಹೋದರಿಯರನ್ನು ಇದ್ದಾರೆ. ಕುಟುಂಬ ನಿರ್ವಹಣೆಗಾಗಿ ಮುಂಬೈನಲ್ಲಿ ಕೆಲಸಕ್ಕೆ ಸೇರಿದ್ದರು.

ಮೂತ್ರಪಿಂಡದ ಖಾಯಿಲೆಯಿಂದ ನನ್ನ ಪೋಷಕರು ಇಬ್ಬರೂ ತೀರಿಕೊಂಡರು. ನನ್ನ ತಂದೆ ಸೌದಿ ಅರೇಬಿಯಾದಲ್ಲಿ ಬಹಳ ದಿನಗಳ ಕಾಲ ಕೆಲಸ ಮಾಡಿದ್ದರು. 12 ವರ್ಷಗಳಿಗೂ ಹೆಚ್ಚು ಕಾಲ ಮೂತ್ರಪಿಂಡ ವೈಫಲ್ಯದ ವಿರುದ್ಧ ಹೋರಾಡಿದ್ದರು. ನಮ್ಮ ಪೋಷಕರು ತುಂಬಾ ನೋವುಂಡಿದ್ದನ್ನು ನಾವು ನೋಡಿದ್ದೇವೆ. ನಮ್ಮ ಪೋಷಕರು ನಮ್ಮೊಂದಿಗೆ ಇಲ್ಲದಿರುವ ಆಘಾತದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದೇವೆ. ನನಗೆ ತಂಗಿ ಇದ್ದಾಳೆ, ಅಕ್ಕನ ಮದುವೆಯಾಗಿದೆ. ಮನೆ ನಿರ್ಮಿಸಲು ನಾನು ಸ್ವಲ್ಪ ಜಮೀನನ್ನು ಮಾರಿದ್ದೆವು. ಇದೀಗ ಮನೆ ನಿರ್ಮಿಸುವುದು ಬಾಕಿ ಇದೆ ಎಂದು ಲಾಟರಿ ಹೊಡೆದ ಖುಷಿಯಲ್ಲಿ ಫಯಾಜ್ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

ಕುಟುಂಬದ ಹೊರೆ ನನ್ನ ಮೇಲೆಯೇ ಇದ್ದ ಕಾರಣ ಒಂದು ವರ್ಷದ ಹಿಂದೆ ಕೆಲಸಕ್ಕಾಗಿ ನಾನು ಮುಂಬೈಗೆ ಬಂದೆ. ಇಬ್ಬರು ಮಕ್ಕಳ ತಂದೆಯಾಗಿರುವ ನನ್ನ ಸಹೋದರ ಕರ್ನಾಟಕದಲ್ಲಿ ನಮ್ಮ ಹೊಲ ಮನೆಯನ್ನು ನೋಡಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.

ಆನ್‍ಲೈನ್ ಮೂಲಕ ಲಾಟರಿ ಖರೀದಿಸುವ ಆಲೋಚನೆಯನ್ನು ನನ್ನ ರೂಮ್‍ಮೇಟ್ ನೀಡಿದ. ಗಡುವು ಮುಗಿದಿದ್ದರಿಂದ ಎರಡು ತಿಂಗಳುಗಳ ಕಾಲ ಲಾಟರಿ ಖರೀದಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಸರಿಯಾದ ಸಮಯಕ್ಕೆ ಖರೀದಿಸಿದೆ. ಸೆಪ್ಟೆಂಬರ್ ಕೊನೆಯ ದಿನ ನಿಜವಾಗಿಯೂ ವಿಜೇತನಾದೆ ಎಂದು ತಿಳಿಸಿದ್ದಾರೆ.

ಲಾಟರಿ ವಿನ್ ಆಗಿದ್ದಕ್ಕೆ ಬಿಗ್ ಟಿಕೆಟ್ ಡ್ರಾದ ರಿಚರ್ಡ್ ಕಾಲ್ ಮಾಡಿದಾಗ ಫಯಾಜ್ ಮೊಬೈಲ್ ಬ್ಯುಸಿ ಬಂದಿತ್ತು. ಗೆದ್ದಿರುವ ಕುರಿತು ತಿಳಿಸಲು ರಿಚರ್ಡ್ ನಾಲ್ಕು ಬಾರಿ ನನಗೆ ಕರೆ ಮಾಡಿದ್ದರು. ನಂತರ ನನಗೆ ಕಾಲ್ ಕನೆಕ್ಟ್ ಆಗಿದೆ, ಈ ಕುರಿತು ರಿಚರ್ಡ್ ಹೇಳುತ್ತಿದ್ದಂತೆ ಅದೃಷ್ಟವನ್ನು ನಾನು ನಂಬಲಿಲ್ಲ. ನಂತರ ಆನ್‍ಲೈನ್‍ನಲ್ಲಿ ಪರಿಶೀಲಿಸಿದೆ. ಕರೆ ಬರುವುದಕ್ಕೂ ಹಿಂದಿನ ರಾತ್ರಿ ನಾನು ಇದನ್ನು ಗೆಲ್ಲುತ್ತೇನೆ ಎಂಬ ಕನಸು ಕಂಡಿದ್ದೆ. ನನ್ನ ಜೀವನದಲ್ಲಿ ಶೀಘ್ರವೇ ಮಹತ್ತರ ಸಂಗತಿ ನಡೆಯಲಿದೆ ಎಂದು ನನ್ನ ಸ್ನೇಹಿತರಿಗೆ ಹೇಳಿದ್ದೆ ಎಂದು ಫಯಾಜ್ ವಿವರಿಸಿದ್ದಾರೆ.

ಈ ಹಣದಿಂದ ನಾನು ಏನು ಮಾಡಬೇಕು ಎನ್ನುವದನ್ನು ತೀರ್ಮಾನಿಸಿಲ್ಲ. ಆದರೆ ನನ್ನ ಸಹೋದರನಿಗೆ ಅರ್ಹತೆಗೆ ಅನುಗುಣವಾಗಿ ಕೆಲಸ ಸಿಗಬೇಕು ಎಂಬುದು ನನ್ನ ಆಸೆಯಾಗಿದೆ. ಸಹೋದರ ಎಂಬಿಎ ಪದವೀಧರರಾಗಿದ್ದು, ಕರ್ನಾಟಕದಲ್ಲಿ ಮೀನು ಮಾರುಕಟ್ಟೆಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಮಾರಾಟ ಮಾಡಿದ್ದ ನಮ್ಮ ಜಮೀನನ್ನು ಮರಳಿ ಪಡೆಯಬೇಕೆಂಬುದು ನನ್ನ ಆಸೆಯಾಗಿದೆ. ಶೀಘ್ರದಲ್ಲೇ ನನ್ನ ಮನೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುತ್ತೇನೆ. ನಾನು ಕೆಲವು ಚಾರಿಟಿ ಕೆಲಸವನ್ನು ಮಾಡುತ್ತೇನೆ. ಇನ್ನೂ ಯುಎಇಗೆ ಹೋಗಿಲ್ಲ, ಚೆಕ್ ಸ್ವೀಕರಿಸಲು ಮುಂದಿನ ತಿಂಗಳು ಹೊರಡುತ್ತೇನೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *