ಹೊಸಕೋಟೆಯಲ್ಲಿ ಎಂಟಿಬಿ, ಬಚ್ಚೇಗೌಡ ಕಾಳಗ

ಬೆಂಗಳೂರು: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾಳಗ ದಿನೇ ದಿನೇ ರಂಗೇರುತ್ತಿದೆ. ಸಂಸದ ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡರಿಗೆ ಬಿಜೆಪಿ ಟಿಕೆಟ್ ಸಿಗಲ್ಲ ಅನ್ನೋದು ಬಹುತೇಕ ಖಚಿತ ಆಗಿದೆ. ಯಾಕಂದ್ರೆ ಬಿಜೆಪಿ ಟಿಕೆಟ್ ಅನರ್ಹರಿಗೆ ಎಂದು ಖುದ್ದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ ರೆಬಲ್ ಆಗುವ ಮುನ್ಸೂಚನೆ ನೀಡಿದ್ದಾರೆ.

ಹೊಸಕೋಟೆಯ ಗಾಂಧಿ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಬಚ್ಚೇಗೌಡ, ಉಪಚುನಾವಣೆ ವಿಚಾರವಾಗಿ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದರು. ಅನರ್ಹತೆ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದ್ರು ಚುನಾವಣೆ ಘೋಷಣೆ ಮಾಡಿದ್ದು ಯಾಕೆ? ಮತ್ತೆ ಅನರ್ಹತೆ ಪ್ರಕರಣ ಕೋರ್ಟ್ ಮುಂದೆ ಹೋಗ್ತಿದ್ದಂತೆ ಚುನಾವಣೆ ಮುಂದೂಡಿದ್ದು ಯಾಕೆ? ಎಂದು ಚುನಾವಣಾ ಆಯೋಗಕ್ಕೆ ಬಚ್ಚೇಗೌಡರು ಪ್ರಶ್ನೆ ಮಾಡಿದರು.

ಇದೇ ವೇಳೆ ತಮ್ಮ ಬಹುಕಾಲದ ವೈರಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಆಕ್ರೋಶ ವ್ಯಕಪಡಿಸೋದನ್ನು ಬಚ್ಚೇಗೌಡರು ಮರೆಯಲಿಲ್ಲ. ಮುಂದಿನ ಮೂರೂವರೆ ವರ್ಷ ನಾನೇ ಮಂತ್ರಿ, ಕ್ಷೇತ್ರಕ್ಕೆ ಕೋಟಿ ಕೋಟಿ ಅನುದಾನ ತರ್ತೀನಿ ಅನ್ನೋ ಎಂಟಿಬಿ ಮಾತಿಗೆ, ಎನ್ ಅವರಪ್ಪನ ಮನೆಯಿಂದ ತಂದು ಕೊಡ್ತಾನ ದುಡ್ಡು ಅಂತ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ನಾವು ಕಟ್ಟೋ ತೆರಿಗೆ ಹಣ ನಮಗೆ ವಾಪಸ್ ಕೊಡ್ತಾರೆ. ಏನು ಅವನ ಮನೆ ಹಣಾನಾ ಕೇಳೋವಷ್ಟು ಕೊಡೋಕೆ ಎಂದು ತಿರುಗೇಟು ಕೊಟ್ಟರು.

ನನ್ನ ಪುತ್ರ ಶರತ್ ಬಚ್ಚೇಗೌಡ ಹೊಸಕೋಟೆ ತಾಲೂಕಿನ ಜನತೆಯ ಮತದಾರರ ತೀರ್ಮಾನದಂತೆ ನಡೆದುಕೊಳ್ಳುತ್ತಾನೆ. ಚುನಾವಣೆ ದೂರವಿದ್ದು, ಮುಂದೆ ಏನಾಗುತ್ತೋ ನೋಡೋಣ ಎಂದು ಮಗನ ಸ್ಪರ್ಧೆಯನ್ನು ಬಚ್ಚೇಗೌಡ್ರು ಪರೋಕ್ಷವಾಗಿ ಖಚಿತ ಪಡಿಸಿದರು.

Comments

Leave a Reply

Your email address will not be published. Required fields are marked *