ಮಧ್ಯಂತರ ಚುನಾವಣೆ ಬಂದ್ರೆ ಏಕಾಂಗಿಯಾಗಿ ಸ್ಪರ್ಧೆ: ಎಚ್‍ಡಿಡಿ

ಬೆಂಗಳೂರು: ರಾಜ್ಯದಲ್ಲಿ ಯಾವಾಗಬೇಕಾದರು ಮಧ್ಯಂತರ ಚುನಾವಣೆ ಬರಬಹುದು ಕಾರ್ಯಕರ್ತರು ಸಿದ್ಧವಾಗಿ ಇರುವಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಪಕ್ಷ ಸಂಘಟನೆಗೆ ನಡೆದ ಇಂದಿನ ಸಭೆಯಲ್ಲಿ ಮುಖಂಡರಿಗೆ ಮಧ್ಯಂತರ ಚುನಾವಣೆ ಸುಳಿವು ನೀಡಿದ ದೇವೇಗೌಡರು, ಶಿವಮೊಗ್ಗ, ಚಿಕ್ಕಮಗಳೂರು, ಕೊಡುಗು ಜಿಲ್ಲೆಯ ಜೆಡಿಎಸ್ ಮುಖಂಡರೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಮಧ್ಯಂತರ ಚುನಾವಣೆ ಬಂದೇ ಬರುತ್ತೆ ಎಂದರು ಭವಿಷ್ಯ ನುಡಿದ ಎಚ್‍ಡಿಡಿ, ಇಂದಿನ ರಾಜಕೀಯ ಪರಿಸ್ಥಿತಿ ನೋಡಿದರೆ ಮಧ್ಯಂತರ ಚುನಾವಣೆ ಸಾಧ್ಯತೆ ಹೆಚ್ಚಿದೆ. ಮುಖಂಡರು ಮೈಮರಿಯದೆ ಪಕ್ಷ ಸಂಘಟನೆ ಮಾಡಿ. ಮಧ್ಯಂತರ ಚುನಾವಣೆ ಬಂದರೆ ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಸ್ಪಷ್ಟಪಡಿಸಿದರು.

ಮಧ್ಯಂತರ ಚುನಾವಣೆ ಬಂದರೆ ನಾವು ಏಕಾಂಗಿ ಸ್ಪರ್ಧೆ ಮಾಡೋಣ. ಈ ಬಾರಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಜನವರಿ, ಫೆಬ್ರವರಿಯಲ್ಲಿ ಚುನಾವಣೆ ಬಂದರು ಯಾವುದೇ ಅಚ್ಚರಿ ಬೇಡ. ಹೀಗಾಗಿ ಸಿದ್ಧರಾಗಿದ್ದು, ಜಿಲ್ಲಾ ಪದಾಧಿಕಾರಿಗಳ ಬದಲಾವಣೆ ಮಾಡುವುದಾದರೆ ಮಾಡಿ. ಈ ತಿಂಗಳು ಆದ ಮೇಲೆ ನಾನು ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ಕುಮಾರಸ್ವಾಮಿ ಅವರು ಕೂಡಾ ಜಿಲ್ಲೆಗಳ ಪ್ರವಾಸ ಮಾಡುತ್ತಾರೆ ಎಂದು ಪಕ್ಷದ ಮುಖಂಡರಿಗೆ ವಿಶ್ವಾಸ ತುಂಬಿದರು.

ಸಮ್ಮಿಶ್ರ ಸರ್ಕಾರದಲ್ಲಿ ಎಚ್‍ಡಿಕೆ ಒಳ್ಳೆ ಕೆಲಸ ಮಾಡಿದ್ದರು. ಆದರೆ ಯಾರು ಬೆಂಬಲ ಕೊಡಲಿಲ್ಲ. ಕುಮಾರಸ್ವಾಮಿ ಸಿಎಂ ಆದಾಗ ಮಾಡಿದ ಕೆಲಸವನ್ನು ಮನೆ ಮನೆಗೆ ತಲುಪಿಸಿ. ಮಧ್ಯಂತರ ಚುನಾವಣೆ ನಡೆದರೆ ಜೆಡಿಎಸ್ ಗೆಲುವು ನಿಶ್ಚಿತ. ಪಕ್ಷ ಬಿಟ್ಟು ಹೋದವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ತುಂಬಾ ಜನ ಹೀಗೆ ಪಕ್ಷ ಬಿಟ್ಟು ಹೋಗಿದ್ದಾರೆ. ಪಕ್ಷದಲ್ಲಿ ಬೆಳೆದು ಇವತ್ತು ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ನನಗೆ ಪಕ್ಷ ಕಟ್ಟೋದು ಗೊತ್ತು. ಕಾರ್ಯಕರ್ತರು ನನ್ನ ಜೊತೆ ಇದ್ದರೆ ಸಾಕು. ಮತ್ತೆ ಪಕ್ಷ ಅಧಿಕಾರಿಕ್ಕೆ ತರುತ್ತೇನೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *