ಮೊಬೈಲ್‍ಗಾಗಿ ಎದೆಗೆ ಚಾಕು ಹಾಕಿ ವ್ಯಕ್ತಿಯ ಬರ್ಬರ ಹತ್ಯೆ

ಬೆಂಗಳೂರು: ಮೊಬೈಲ್‍ಗಾಗಿ ಎದೆಗೆ ಚಾಕು ಹಾಕಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ಕೆಆರ್ ಮಾರುಕಟ್ಟೆಯ ಜಮೀಯಾ ಮಸೀದಿ ಬಳಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಮೆಹಬೂಬ್ ಎಂದು ಗುರುತಿಸಲಾಗಿದೆ. ಫೋನ್ ಮಾಡಬೇಕು ಎಂದು ಮೊಬೈಲ್ ಪಡೆದುಕೊಂಡ ಸದ್ದಾಂ, ನಂತರ ಮೊಬೈಲ್ ವಾಪಸ್ ಕೇಳಲು ಹೋದಾಗ ಎದೆಗೆ ಚಾಕು ಹಾಕಿದ್ದಾನೆ.

ಮಾರುಕಟ್ಟೆಯ ಜಮೀಯಾ ಮಸೀದಿ ಬಳಿ ಮೆಹಬೂಬ್ ಮತ್ತು ಅವನ ಸ್ನೇಹಿತ ಅಕ್ರಂ ಇಬ್ಬರು ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಸದ್ದಾಂ ಫೋನ್ ಮಾಡಬೇಕು ಮೊಬೈಲ್ ಕೊಡಿ ಎಂದು ಮೆಹಬೂಬ್ ಬಳಿ ಮೊಬೈಲ್ ಪಡೆದುಕೊಂಡಿದ್ದಾನೆ. ನಂತರ ಮೊಬೈಲ್ ಎಷ್ಟು ಬಾರಿ ವಾಪಸ್ ಕೇಳಿದರೂ ಕೊಟ್ಟಿರಲಿಲ್ಲ. ಯಾವ ಮೊಬೈಲ್? ನಂಗೆ ನೀನು ಏನು ಕೊಟ್ಟೆ ಇಲ್ಲ ಎಂದು ಹೇಳಿ ಗಲಾಟೆ ಮಾಡಿದ್ದಾನೆ.

ಈ ವಿಚಾರಕ್ಕೆ ಮೆಹಬೂಬ್ ಮತ್ತು ಸದ್ದಾಂ ನಡುವೆ ಜಗಳವಾಗಿದೆ. ಈ ವೇಳೆ ಆರೋಪಿ ಸದ್ದಾಂ ಚಾಕುವಿನಿಂದ ಮೆಹಬೂಬ್ ಎದೆಭಾಗಕ್ಕೆ ಇರಿದಿದ್ದಾನೆ. ನಂತರ ತೀವ್ರವಾಗಿ ಗಾಯಗೊಂಡಿದ್ದ ಮೆಹಬೂಬ್‍ನನ್ನು ಪೊಲೀಸರು ಮತ್ತು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೆಹಬೂಬ್ ಮೃತಪಟ್ಟಿದ್ದಾನೆ.

ಈ ಸಂಬಂಧ ಕೆ.ಆರ್ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಸದ್ದಾಂನನ್ನು ಬಂಧಿಸಿ ಕೆ.ಆರ್ ಮಾರ್ಕೆಟ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *