ಡಿಕೆಶಿ ಕಾನೂನು ಮುರಿದಿದ್ರೆ ಕ್ರಮಕೈಗೊಳ್ಳಲಿ, ನಮ್ಮ ತಕರಾರಿಲ್ಲ- ಪರಮೇಶ್ವರ್

ತುಮಕೂರು: ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ನಮೆಲ್ಲರಿಗೂ ಗೊತ್ತು. ಡಿ.ಕೆ.ಶಿವಕುಮಾರ್ ಏನಾದರೂ ಕಾನೂನು ಮುರಿದಿದ್ದರೆ ಕಾನೂನಿನ ವಿಧಿವಿಧಾನ ಪ್ರಕಾರ ಕ್ರಮಕೈಗೊಳ್ಳಲು ನಮ್ಮದು ಯಾವುದೇ ತಕರಾರಿಲ್ಲ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಎಲ್ಲರೂ ದೇಶದ ಕಾನೂನಿಗೆ ಗೌರವ ಕೊಡುತ್ತೇವೆ. ಸುಮಾರು ದಿನಗಳಿಂದ ಡಿಕೆಶಿ ಅವರಿಗೆ ಐಟಿ ಮತ್ತು ಇಡಿ ಕೊಟ್ಟಿರುವ ತೊಂದರೆ ನೋಡಿದರೆ ನಮಗೆ ಸರಿ ಕಾಣುವುದಿಲ್ಲ. ಅವರಿಗೆ ಕಾನೂನು ನ್ಯಾಯ ಕೊಡುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಬಿಜೆಪಿ ದೇಶದಲ್ಲಿ ಸೇಡಿನ ರಾಜಕಾರಣ ಮಾಡುತ್ತಿದೆ. ಪಿ. ಚಿದಂಬರಂ ಅವರನ್ನು ನಡೆಸಿಕೊಂಡ ರೀತಿ ನೋಡಿದರೆ ಬಿಜೆಪಿಯ ಸೇಡಿನ ರಾಜಕಾರಣ ಇದು ಎನ್ನುವುದು ತಿಳಿಯುತ್ತದೆ. ಇದೇ ವೇಳೆ ಡಿಕೆ ಶಿವಕುಮಾರ್ ನಾರ್ಮಲ್ ಮೆಡಿಕಲ್ ರಿಪೋರ್ಟ್ ಕೊಡುವಂತೆ ಇಡಿ ಅಧಿಕಾರಿಗಳು ವೈದ್ಯರಿಗೆ ಒತ್ತಡ ಹಾಕಿದ ವಿಚಾರವಾಗಿ ಮಾತನಾಡಿದ ಅವರು, ನನಗೆ ಗೊತ್ತಿರುವ ಹಾಗೆ ಡಿಕೆಶಿಗೆ ಬಿಪಿ ಮತ್ತು ಶುಗರ್ ಇದೆ. ಅದಕ್ಕೆಲ್ಲಾ ಅವರು ಔಷಧ ತೆಗೆದುಕೊಳ್ಳುತ್ತಿದ್ದರು ಎಂದು ಪ್ರತಿಕ್ರಿಯಿಸಿದರು.

ಈ ರೀತಿಯ ಸಮಯದಲ್ಲಿ ಎಂಥವರಿಗೂ ಕೂಡ ಆರೋಗ್ಯ ಏರುಪೇರಾಗುತ್ತದೆ. ಆದರೆ ಇಡಿ ಅಧಿಕಾರಿಗಳು ಯಾವ ರೀತಿಯಲ್ಲಿ ವೈದ್ಯರಿಗೆ ಒತ್ತಡ ಹಾಕಿದರು ಎಂಬುದು ನನಗೆ ಗೊತ್ತಿಲ್ಲ. ಒಂದು ವೇಳೆ ಹಾಗೇನಾದರೂ ಇಡಿ ಅಧಿಕಾರಿಗಳು ಮಾಡಿದ್ದರೆ ಅದು ಅವರ ಮಾಡಿದ ದೊಡ್ಡ ಅಪರಾಧ ಎಂದು ಬೇಸರ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *