ಹಣ ನೀಡದ್ದಕ್ಕೆ ಮಾಡೆಲ್ ಹತ್ಯೆಗೈದ ಬೆಂಗಳೂರು ಕ್ಯಾಬ್ ಚಾಲಕ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾಡೆಲ್ ಬರ್ಬರ ಹತ್ಯೆ ಪ್ರಕರಣವನ್ನು ಬಾಗಲೂರು ಪೊಲೀಸರು ಭೇದಿಸಿದ್ದು ಕ್ಯಾಬ್ ಚಾಲಕನನ್ನು ಬಂಧಿಸಿದ್ದಾರೆ.

ಹೆಚ್.ಎಂ.ನಾಗೇಶ್ (22) ಬಂಧನಕ್ಕೊಳಗಾದ ಓಲಾ ಕ್ಯಾಬ್ ಚಾಲಕ. ಜುಲೈ 31ರಂದು ಬಾಗಲೂರಿನ ಕಾಡಯರಪನಹಳ್ಳಿ ಬಳಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಮಹಿಳೆಯ ಕತ್ತು ಕುಯ್ದು, ಚಾಕುವಿನಿಂದ ದೇಹದ ವಿವಿಧ ಭಾಗಗಳಿಗೆ ಇರಿದು, ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿತ್ತು.

ಈ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಅಪರಿಚಿತ ಮಹಿಳೆಯ ಶವದ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಾಗಲೂರು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡು ಕಾರ್ಯಚರಣೆ ನಡೆಸಿದ್ದರು. ಆಗ ಮಹಿಳೆಯ ಗುರುತು ಪತ್ತೆಯಾಗಿದೆ.

ಮೃತ ಮಹಿಳೆ ಪಶ್ಚಿಮ ಬಂಗಾಳ ಮೂಲದ ಪೂಜಾ ಸಿಂಗ್ ಎಂದು ತಿಳಿದು ಬಂದಿದೆ. ಕ್ಯಾಬ್ ಚಾಲಕ ನಾಗೇಶ್, ಪೂಜಾಳನ್ನು ಕೊಲೆ ಮಾಡಿ ಆಕೆ ಬಳಿಯಿದ್ದ ಚಿನ್ನಾಭರಣ ದೋಚಿದ್ದನು. ಜುಲೈ 30ರಂದು ಮಾಡೆಲ್ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕ್ಯಾಬ್‍ನಲ್ಲಿ ತೆರಳುತ್ತಿದ್ದಳು. ಈ ವೇಳೆ ಹಣ ಮತ್ತು ಚಿನ್ನಾಭರಣ ಆಸೆಗಾಗಿ ನಾಗೇಶ್ ಮಹಿಳೆಯ ಕೊಲೆ ಮಾಡಿದ್ದಾನೆ. ಈ ಬಗ್ಗೆ ಪೂಜಾ ಸಿಂಗ್ ದೇ ಪತಿ ಸೌದಿತ್ ದೇ ಕೊಲ್ಕತ್ತಾ ನಗರದ ನ್ಯೂ ಟೌನ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಸುಳಿವು ಸಿಕ್ಕಿದ್ದು ಹೇಗೆ?
ಮಾಡೆಲ್ ಕೊಲೆಯ ಸುಳಿವು ಬಾರ್ ಕೋಡ್‍ನಿಂದ ತಿಳಿದು ಬಂತು. ಮಾಡೆಲ್ ಧರಿಸಿದ್ದ ಜಲಸ್ 21 ಕಂಪನಿಯ ಜೀನ್ಸ್ ಪ್ಯಾಂಟ್‍ನ ಬಾರ್ ಕೋಡ್, ಟೈಟಾನ್ ವಾಚ್ ಮತ್ತು ಹಾಕಿಕೊಂಡಿದ್ದ ಉಂಗುರದಿಂದ ಗುರುತು ಪತ್ತೆಯಾಗಿದೆ. ಸಾಮಾನ್ಯವಾಗಿ ಈ ರೀತಿಯಾದ ಉಂಗುರ ಪಶ್ಚಿಮ ಬಂಗಾಳದವರು ಧರಿಸುತ್ತಾರೆ. ಈ ವೇಳೆ ಪೊಲೀಸರು ಪಶ್ಚಿಮ ಬಂಗಾಳಕ್ಕೆ ತೆರಳಿ ಮಾಡೆಲ್ ನಾಪತ್ತೆಯಾದ ವಿಚಾರವನ್ನು ಖಚಿತಪಡಿಸಿದ್ದರು.

ಕಳೆದ ತಿಂಗಳ 31ರಂದು ರಾತ್ರಿ 10 ಗಂಟೆಗೆ ಪೂಜಾ ಕ್ರೆಸೆಂಟ್ ರಸ್ತೆಯಿಂದ ಆರೋಪಿ ನಾಗೇಶ್‍ನ ಓಲಾ ಕ್ಯಾಬ್ ಹತ್ತಿದ್ದಳು. ಪರಪ್ಪನ ಅಗ್ರಹಾರಕ್ಕೆ ಡ್ರಾಪ್ ಮಾಡಿಸಿಕೊಂಡು, ಬೆಳಗ್ಗೆ ನಾಲ್ಕು ಗಂಟೆಗೆ ನೀನೇ ಪಿಕ್ ಅಪ್ ಮಾಡು ಎಂದು ಪೂಜಾ ಹೇಳಿದ್ದಾಳೆ. ಬೆಳಗ್ಗೆ ಪಿಕ್ ಮಾಡಿಕೊಂಡು ಬರುವಾಗ ನಾಗೇಶ್ ಹಣ ಕೇಳಿದ್ದಾನೆ. ಹಣ ಇಲ್ಲ ಎಂದು ಹೇಳಿದಾಗ ಈಕೆಯ ಬಳಿ ಸಾಕಷ್ಟು ಹಣ ಇರಬಹುದು ಎಂದು ಜಾಕ್ ರಾಡ್‍ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ.

Comments

Leave a Reply

Your email address will not be published. Required fields are marked *