ಯತ್ನಾಳ್‍ಗೆ ಭಗವಂತ ತಿದ್ದಿಕೊಳ್ಳುವ ಬುದ್ಧಿ ನೀಡಲಿ – ಈಶ್ವರಪ್ಪ ಕಿಡಿ

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಕೇಳಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುವ ಅವಶ್ಯಕತೆ ಇಲ್ಲ ಎಂದು ಬಸನ ಗೌಡ ಯತ್ನಾಳ್ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ನೇಮಕ ವಿರುದ್ಧ ಯತ್ನಾಳ್ ಟೀಕಿಸಿದ ಹಿನ್ನೆಲೆ ಇಂದು ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪ ಕಿಡಿ ಕಾರಿದ್ದಾರೆ. ಪಕ್ಷದಲ್ಲೆ ಇದ್ದುಕೊಂಡು ಈ ರೀತಿ ಹೇಳುವುದು ಒಳ್ಳೆಯದಲ್ಲ ಎಂದು ಯತ್ನಾಳ್ ಮುಖಕ್ಕೆ ಹಲವು ಬಾರಿ ಹೇಳಿದ್ದೇನೆ. ಭಗವಂತ ಅವರಿಗೆ ತಿದ್ದಿಕೊಳ್ಳುವ ಬುದ್ಧಿ ಕೊಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಯಾರು ಯಾರಿಗೆ ಬೇಕಾದರೂ ಗಡುವು ಕೊಡುವ ಅಧಿಕಾರ ಇದೆ. ವ್ಯಕ್ತಿ ಸ್ವಾತಂತ್ರ್ಯ ನಮ್ಮ ದೇಶದಲ್ಲೇ ತುಂಬಾ ಇದೆ ಎಂದು ಅಸಮಾಧಾನಗೊಂಡ ಬಿಜೆಪಿ ಶಾಸಕರಿಗೆ ಈಶ್ವರಪ್ಪ ಟಾಂಗ್ ನೀಡಿದರು.

ಬಾಲಚಂದ್ರ ಜಾರಕಿಹೊಳಿ ಯಾವುದೇ ಕಾರಣಕ್ಕೂ ಸರ್ಕಾರ ಬೀಳಿಸುವುದಿಲ್ಲ. ಕುಟುಂಬದಲ್ಲಿ ಅನೇಕ ಸಮಸ್ಯೆಗಳು ಬಂದಾಗ ಅದನ್ನು ಹೊರ ಹಾಕುವುದು ತಪ್ಪಲ್ಲ. ಇದರಿಂದ ನಮ್ಮ ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ತೊಂದರೆ ಆಗುವುದಿಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದರು.

ಅನರ್ಹ ಶಾಸಕರು ರಾಜೀನಾಮೆ ನೀಡಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅನರ್ಹ ಶಾಸಕರಿಗೆ ದ್ರೋಹ ಮಾಡುವುದಿಲ್ಲ. ಅವರಿಗೂ ನಾವು ನ್ಯಾಯ ನೀಡುತ್ತೇವೆ. ರಮೇಶ್ ಕುಮಾರ್ ಅವರು ಒಬ್ಬ ಸಂವಿಧಾನ ತಜ್ಞ. ಅಂಬೇಡ್ಕರ್ ಬಿಟ್ಟರೆ ರಮೇಶ್ ಕುಮಾರ್ ಅವರೇ ಎರಡನೇ ಅಂಬೇಡ್ಕರ್. ರಮೇಶ್ ಕುಮಾರ್ ಕಾಂಗ್ರೆಸ್ ಏಜೆಂಟ್‍ರಂತೆ ವರ್ತಿಸಿ, ಸಭಾಧ್ಯಕ್ಷ ಸ್ಥಾನವನ್ನು ದುರುಪಯೋಗ ಮಾಡಿಕೊಂಡರು ಎಂದು ಹರಿಹಾಯ್ದರು.

Comments

Leave a Reply

Your email address will not be published. Required fields are marked *