ಮಂಗಳಮುಖಿಯರಿಂದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ

ದಾವಣಗೆರೆ: ಮಂಗಳಮುಖಿಯರೆಂದರೆ ಕೆಲವರು ಮೂಗು ಮುರಿಯುತ್ತಾರೆ. ಆದರೆ ಅದೇ ಮಂಗಳಮುಖಿಯರೀಗ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದು, ಉತ್ತರ ಕರ್ನಾಟದ ಪ್ರವಾಹಕ್ಕೆ ಸಹಾಯ ಮಾಡಲು ದೇಣಿಗೆ ಸಂಗ್ರಹಿಸುತ್ತಿದ್ದಾರೆ.

ಉತ್ತರ ಕರ್ನಾಟಕದಲ್ಲಿನ ಪ್ರವಾಹಕ್ಕೆ ಜನ ತತ್ತರಿಸಿ ಹೋಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನೆರೆ ಇಳಿದ ನಂತರವಂತೂ ಅವರ ಜೀವನ ಹೇಳ ತೀರದಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿ, ಮನೆ ಬಿದ್ದಿರುವುದು, ಮನೆಯಲ್ಲಿ ಕೆಸರು ತುಂಬಿಕೊಂಡಿರುವುದು ಸೇರಿದಂತೆ ವಾಸಿಸಲು ಸಾಧ್ಯವಾಗದ ಸ್ಥಿತಿ ತಲುಪಿವೆ. ಈಗಾಗಲೇ ಸಾರ್ವಜನಿಕರು ನೆರೆ ಸಂತ್ರಸ್ತರ ಸಹಾಯಕ್ಕೆ ಧಾವಿಸಿದ್ದು, ಸಾಕಷ್ಟು ಸಹಾಯವನ್ನು ಮಾಡಿದ್ದಾರೆ.

ರಾಜ್ಯದ ವಿವಿಧ ಕಡೆಯಿಂದ ಸಂತ್ರಸ್ತರಿಗೆ ಸಹಾಯ ಹರಿದುಬರುತ್ತಿದೆ. ಈ ಬೆನ್ನಲ್ಲೇ ಇದೀಗ ಮಂಗಳಮುಖಿಯರು ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾಗಿದ್ದು, ದಾವಣಗೆರೆಯಲ್ಲಿ ನೆರೆ ಸಂತ್ರಸ್ತರಿಗಾಗಿ ವಿಶೇಷವಾಗಿ ಮಂಗಳಮುಖಿಯರು ದೇಣಿಗೆ ಸಂಗ್ರಹಿಸುವ ಮೂಲಕ ತಮ್ಮ ಕೊಡುಗೆ ನೀಡಿ ನೆರವಾಗುತ್ತಿದ್ದಾರೆ.

ದಾವಣಗೆರೆಯ ಮಹಾನಗರ ಪಾಲಿಕೆ ಮುಂಭಾಗ 20ಕ್ಕೂ ಹೆಚ್ಚು ಮಂಗಳಮುಖಿಯರು ದೇಣಿಗೆ ಡಬ್ಬಿಗಳನ್ನು ಹಿಡಿದು ನೆರೆ ಸಂತ್ರಸ್ತರಿಗೆ ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇಷ್ಟು ದಿನ ಕೇವಲ ಅವರ ಹೊಟ್ಟೆ ತುಂಬಿಸಿಕೊಳ್ಳಲು ಸರ್ಕಲ್‍ಗಳಲ್ಲಿ ನಿಂತು ಪ್ರಯಣಿಕರ ಬಳಿ ಹಣ ಕೇಳುತ್ತಿದ್ದ ಮಂಗಳಮುಖಿಯರು, ಉತ್ತರ ಕರ್ನಾಟಕ ಜನರ ಕಷ್ಟವನ್ನು ನೋಡಲಾಗದೇ ದೇಣಿಗೆ ಸಂಗ್ರಹಿಸಿ ಅವರಿಗೆ ನೆರವಾಗುತ್ತಿದ್ದಾರೆ.

ಎರಡು ದಿನ ಉತ್ತರ ಕರ್ನಾಟಕದ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಲಿದ್ದು, ಸಂಗ್ರಹಿಸಿದ ಹಣದಲ್ಲಿ ನಿರಾಶ್ರಿತರಿಗೆ ಉಪಯುಕ್ತವಾಗುವ ವಸ್ತುಗಳನ್ನು ಖರೀದಿಸಿ ನಾವೇ ನೇರವಾಗಿ ಹೋಗಿ ಸಂತ್ರಸ್ತರಿಗೆ ವಿತರಿಸುತ್ತೇವೆ ಎಂದು ಮಂಗಳಮುಖಿಯರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *