ಡಿಕೆಶಿ ಹೇಳಿದ್ದು ಆರ್. ಆಶೋಕ್‍ಗೆ ನನಗಲ್ಲ: ಎಂಬಿಪಿ

-ಮಾಧ್ಯಮಗಳ ಮೇಲೆ ಕಿಡಿ
-ನಮ್ಮಿಬ್ಬರ ಮಧ್ಯೆ ಜುಗಲ್‍ಬಂದಿ ಇರುತ್ತೆ

ವಿಜಯಪುರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದು ಆರ್.ಅಶೋಕ್ ಬಗ್ಗೆ ನನಗಲ್ಲ. ಮಾಧ್ಯಮಗಳಲ್ಲಿ ಈ ಕುರಿತು ತಪ್ಪು ಪ್ರಚಾರವಾಗಿದೆ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ನಾನು ಡಿ.ಕೆ.ಶಿವಕುಮಾರ್ ಒಳ್ಳೆಯ ಸ್ನೇಹಿತರು, ನಮ್ಮಿಬ್ಬರ ಮಧ್ಯೆ ಆಗಾಗ ಜುಗಲ್ ಬಂದಿ ನಡೆಯುತ್ತದೆ. ಈ ಕುರಿತು ನಾನು ಡಿ.ಕೆ.ಶಿವಕುಮಾರ್ ಜೊತೆ ಫೋನ್ ಮಾಡಿ ಮಾತನಾಡುತ್ತೇನೆ. ಅನಾವಶ್ಯಕವಾಗಿ ನಮ್ಮಿಬ್ಬರ ಮಧ್ಯೆ ಗೊಂದಲ ಮೂಡಿಸಲಾಗುತ್ತಿದೆ. ಮಾಧ್ಯಮದವರು ಮಾಡಿರುವ ತಪ್ಪಿನಿಂದಾಗಿ ಈ ರೀತಿ ಆಗಿದೆ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ನಾನು ಗೃಹ ಸಚಿವನಾಗಿದ್ದಾಗ ಫೋನ್ ಟ್ಯಾಪಿಂಗ್ ಕುರಿತು ಅಧಿಕಾರಿಗಳು ಸೇರಿದಂತೆ ಯಾರೂ ನನ್ನ ಜೊತೆ ಮಾಹಿತಿ ಹಂಚಿಕೊಂಡಿಲ್ಲ. ನನ್ನ ಆಪ್ತ ಕಾರ್ಯದರ್ಶಿ ಭೀಮಾಶಂಕರ್ ಹಾಗೂ ವಿಶೇಷ ಅಧಿಕಾರಿಯಾಗಿದ್ದ ಶಶಿ ಅವರ ಫೋನ್ ಟ್ಯಾಪ್ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಫೋನ್ ಟ್ಯಾಪಿಂಗ್ ಅಷ್ಟು ಸಲಿಸಾದ ಕೆಲಸವಲ್ಲ. ಹೀಗಾಗಿ ಫೋನ್ ಟ್ಯಾಪಿಂಗ್ ಮಾಡಿರಲು ಸಾಧ್ಯವಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ರಾಮಕೃಷ್ಣ ಹೆಗಡೆ ಅವರ ಅವಧಿಯಲ್ಲಿ ನಡೆದ ಫೋನ್ ಟ್ಯಾಪಿಂಗ್ ಪ್ರಕರಣವನ್ನು ನೋಡಿದ್ದೇವೆ. ಹೀಗಾಗಿ ಯಾವುದೇ ರಾಜಕಾರಣಿ ಫೋನ್ ಟ್ಯಾಪಿಂಗ್ ಮಾಡುವ ಕೆಲಸಕ್ಕೆ ಕೈ ಹಾಕೋದಿಲ್ಲ. ಅಲ್ಲದೆ, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತಾಡಿ ಮಾಹಿತಿ ಪಡೆದಿದ್ದೇನೆ. ಯಾವುದೇ ರೀತಿಯ ಫೋನ್ ಟ್ಯಾಪಿಂಗ್ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಅಧಿಕಾರಿಗಳು ಫೋನ್ ಟ್ಯಾಪಿಂಗ್ ಆಗಿರೋ ಬಗ್ಗೆ ಅನುಮಾನ ಇದೆ ಎಂದಿದ್ದಾರೆ. ಹೀಗಾಗಿ ಪ್ರಕರಣದ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ನಾನು ತಪ್ಪು ಮಾಡಿದ್ದಲ್ಲಿ ನನಗೂ ಶಿಕ್ಷೆಯಾಗಲಿ, ಫೋನ್ ಟ್ಯಾಪಿಂಗ್ ತನಿಖೆ ಬಗ್ಗೆ ಸಿದ್ದರಾಮಯ್ಯ ಅವರದು ವೈಯಕ್ತಿಕ ಅಭಿಪ್ರಾಯ. ಸಿದ್ದರಾಮಯ್ಯ ಅವರ ಸಹಾಯಕ ವೆಂಕಟೇಶ್ ಅವರ ಫೋನ್‍ನ್ನು ಕದ್ದಾಲಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ತನಿಖೆಗೆ ಆಗ್ರಹಿಸಿದ್ದಾರೆ. ಸಿಬಿಐ ತನಿಖೆ ಬಗ್ಗೆ ನಮಗೆ ನಂಬಕೆಯಿಲ್ಲ. ರಾಜ್ಯದಲ್ಲೇ ಅತ್ಯುತ್ತಮ ಅಧಿಕಾರಿಗಳಿದ್ದಾರೆ, ಅವರೇ ತನಿಖೆ ಮಾಡಲು ಸಮರ್ಥರಾಗಿದ್ದಾರೆ ಎಂದರು.

ಶುಕ್ರವಾರ ಭಿನ್ನ ಹೇಳಿಕೆ:
ಫೋನ್ ಟ್ಯಾಪಿಂಗ್ ಕುರಿತು ಶುಕ್ರವಾರ ಹೇಳಿಕೆ ನೀಡಿದ್ದ ಇಬ್ಬರೂ ನಾಯಕರೂ ಸಹ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಎಂ.ಬಿ.ಪಾಟೀಲ್ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿ ಕಾರಿದ್ದರು. ಫೋನ್ ಕದ್ದಾಲಿಕೆ ಆಗಿದ್ದರೆ ತನಿಖೆ ಆಗಲಿ. ಅದರಲ್ಲಿ ರಾಜಕೀಯ ಏನಿದೆ? ಜಾತಿ ರಾಜಕಾರಣದ ಆಧಾರದ ಮೇಲೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದ ಓಲೈಕೆಗಾಗಿ ಹೇಳಿಕೆ ಡಿಕೆಶಿ ಇಂತಹ ಹೇಳಿಕೆ ನೀಡಿರಬಹುದು ಎಂದು ಎಂಬಿಪಿ ಹರಿಹಾಯ್ದಿದ್ದರು.

ನಾನು ಸಹ ಒಬ್ಬ ಜವಾಬ್ದಾರಿಯುತ ನಾಯಕ, ಡಿಕೆ ಶಿವಕುಮಾರ್ ಕೂಡ ಒಬ್ಬ ಪ್ರಭಾವಿ ನಾಯಕರಾಗಿದ್ದಾರೆ. ಅವರು ನನ್ನ ಬಗ್ಗೆ ಹಗುರವಾಗಿ ಮಾತನಾಡದಂತೆ ಸಲಹೆ ನೀಡುತ್ತೇನೆ ಎಂದು ಗುಡುಗಿದ್ದರು. ಸ್ನೇಹಿತ ಡಿ.ಕೆ.ಶಿವಕುಮಾರ್ ಹಾಗೂ ನಾನು ಒಂದೇ ಪಕ್ಷದಲ್ಲಿ ಇದ್ದೇವೆ. ಒಕ್ಕಲಿಗರು, ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಓಲೈಸುವ ಆಸೆ ಡಿಕೆ ಶಿವಕುಮಾರ್ ಅವರಿಗೆ ಇರಬಹುದು. ಆದರೆ ನಾನು ಯಾವತ್ತೂ ಅದನ್ನು ಬಯಸಿಲ್ಲ. ನನ್ನ ವಿರುದ್ಧ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ ಎಂದು ಕಿಡಿಕಾರಿದ್ದರು.

ಫೋನ್ ಕದ್ದಾಲಿಕೆ ಬಗ್ಗೆ ತನಿಖೆ ನಡೆಸಿ, ವರದಿ ಪಡೆದ ಮೇಲೆ ಸತ್ಯ ಬೆಳಕಿಗೆ ಬರುತ್ತದೆ. ಸತ್ಯಾಸತ್ಯತೆ ತಿಳಿಯದೆ ಆರೋಪ ಮಾಡುವುದು, ಹಗುರವಾಗಿ ಮಾತನಾಡುವುದು ಸೂಕ್ತವಲ್ಲ ಎಂದು ಅಸಮಾಧಾನ ಹೊರ ಹಾಕಿದ್ದರು.

ಡಿಕೆಶಿ ಹೇಳಿದ್ದೇನು?
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ್ದ ಡಿಕೆಶಿವಕುಮಾರ್, ಯಾವ ಫೋನ್ ಕೂಡ ಟ್ಯಾಪಿಂಗ್ ಆಗಿಲ್ಲ. ಮಾಧ್ಯಮಗಳಿಗೆ ಅದು ಹೇಗೆ ಸಿಗ್ತೋ ಗೊತ್ತಿಲ್ಲ. ನಾನು ಇದರ ಬಗ್ಗೆ ವಿಚಾರಿಸಿದ್ದೇನೆ. ಸಿಎಂ ಇದರ ಬಗ್ಗೆ ಯಾವ ತನಿಖೆ ಬೇಕಾದರೂ ಮಾಡಲಿ ಎಂದು ಹೇಳಿದ್ದರು.

ಫೋನ್ ಟ್ಯಾಪಿಂಗ್ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಆರೋಪ ಮಾಡಿದ್ದಾರೆ. ಹಿಂದಿನ ಗೃಹ ಸಚಿವರಿಗೆ ರಾಜಕಾರಣ ಬೇಕಾಗಿದೆ. ಹಾಗಾಗಿ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಮೇಲೆಲ್ಲ ರೇಡ್ ಗಳು ನಡೆದಿದೆ. ಆಗ ನಮ್ಮ ಮೇಲೆ ಸುಖಾಸುಮ್ಮನೆ ಟ್ಯಾಪಿಂಗ್ ಮಾಡಿದ್ರಾ ಎಂದು ಪ್ರಶ್ನಿಸಿದ್ದಾರೆ. ಅವರು ಏನೇನು ಮಾಡಿದ್ದಾರೆ ಅನ್ನೋದು ಗೊತ್ತಿದೆ, ಏನ್ ಬೇಕೋ ಮಾಡಲಿ, ಹೇಳಲಿ. ಬಿಜೆಪಿಯವರು ನಮ್ಮ ಫೋನ್ ಕದ್ದಾಲಿಸಿದ್ದಾರೆ ಎಂದಿದ್ದರು.

Comments

Leave a Reply

Your email address will not be published. Required fields are marked *