ಇಂಥ ಅಪ್ಪ ಇನ್ಯಾರಿಗೂ ಸಿಗದಿರಲಿ – ತಾಯಿ ಜೊತೆಗೆ ಇಬ್ಬರು ಮಕ್ಕಳು ಆತ್ಮಹತ್ಯೆ

ಬೆಂಗಳೂರು: ಅಪ್ಪನ ವರ್ತನೆ ಸರಿ ಇಲ್ಲ ಎಂದು ವಾಟ್ಸಾಪ್‍ನಲ್ಲಿ ಸ್ಟೇಟಸ್ ಹಾಕಿ ತಾಯಿ ಹಾಗೂ ಇಬ್ಬರು ಮಕ್ಕಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹನುಮಂತನಗರದಲ್ಲಿ ನಡೆದಿದೆ.

ರಾಜೇಶ್ವರಿ, ಮಾನಸ ಹಾಗೂ ಭೂಮಿಕ ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಕ್ಕಳು. ಮೂಲತಃ ಮಂಡ್ಯದವರಾದ ರಾಜೇಶ್ವರಿ 18 ವರ್ಷಗಳ ಹಿಂದೆ ಸಿದ್ದಯ್ಯ ಎಂಬವನನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಸಿದ್ದಯ್ಯನಿಗೆ ಅನುಕಂಪದ ಅಧಾರದಲ್ಲಿ ಕೆಇಬಿಯಲ್ಲಿ ಕೆಲಸ ಸಿಕ್ಕಿತ್ತು. ಆಗ ಸಿದ್ದಯ್ಯನ ಸಂಸಾರದಲ್ಲಿ ಬಿರುಕು ಶುರುವಾಗಿದೆ. ಸಿದ್ದಯ್ಯ ಈ ವಯಸ್ಸಿನಲ್ಲೂ, ಹೆಣ್ಣಿನ ಶೋಕಿಗೆ ಬಿದ್ದಿದ್ದನು. ಇದೇ ವಿಚಾರವಾಗಿ ಸಂಸಾರದಲ್ಲಿ ಪದೇ ಪದೇ ಜಗಳವಾಗುತ್ತಿತ್ತು.

ಅಲ್ಲದೆ ಎದೆಯೆತ್ತರಕ್ಕೆ ಬೆಳೆದಿರುವ ಇಬ್ಬರು ಹೆಣ್ಣು ಮಕ್ಕಳ ಮುಂದೆಯೇ ಪತಿ-ಪತ್ನಿ ಜಗಳವಾಡುತ್ತಿದ್ದರು. ವರಮಹಾಲಕ್ಷ್ನೀ ಹಬ್ಬಕ್ಕೆ ಮನೆಗೆ ಬಾರದ ಪತಿ, ಬೇರೊಂದು ಹೆಣ್ಣಿನ ಜೊತೆ ಟ್ರಿಪ್ ಹೋಗಿದ್ದನು. ಇದರಿಂದ ತೀವ್ರವಾಗಿ ಬೇಸತ್ತ ಮೂವರು ಆತ್ಮಹತ್ಯೆಗೆ ನಿರ್ಧರಿಸಿದ್ದರು. ಮಗಳು ಭೂಮಿಕ, “ಎಲ್ಲರಿಗೂ ಒಳ್ಳೆಯ ತಂದೆ ಸಿಗಬೇಕು. ನಮ್ಮ ಜೀವನನ ಹಾಳು ಮಾಡಿಬಿಟ್ಟ. ನಮ್ಮ ಸಾವಿಗೆ ಸಿದ್ದನೇ ಕಾರಣ” ಎಂದು ವಾಟ್ಸಾಪ್‍ನಲ್ಲಿ ಸ್ಟೇಟಸ್ ಹಾಕಿಕೊಂಡಳು. ಬಳಿಕ ರಾತ್ರಿ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆರೋಪಿ ಸಿದ್ದಯ್ಯ ತಮಿಳುನಾಡಿನ ಕಡೆಗೆ ಟ್ರಿಪ್ ಹೋಗಿದ್ದು, ಹನುಮಂತನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.

 

Comments

Leave a Reply

Your email address will not be published. Required fields are marked *