ತುಂಗಭದ್ರಾ ಡ್ಯಾಂನ 33 ಕ್ರಸ್ಟ್ ಗೇಟ್ ಓಪನ್

– ಗಂಗಾವತಿ ಕಂಪ್ಲಿ ನಡುವಿನ ರಸ್ತೆ ಸಂಪರ್ಕ ಕಟ್

ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಒಳ ಹರಿವು ಹೆಚ್ಚಿದ ಪರಿಣಾಮ ಆಡಳಿತ ಮಂಡಳಿ ಜಲಾಶಯದ ಎಲ್ಲಾ ಗೇಟ್ ಗಳನ್ನು ಓಪನ್ ಮಾಡಿದೆ. ಈ ಮೂಲಕ 33 ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಬಿಡಲಾಗಿದೆ.

ಜಲಾಶಯಕ್ಕೆ 2 ಲಕ್ಷ ಕ್ಯೂಸೆಕ್‍ಗೂ ಹೆಚ್ಚು ಒಳ ಹರಿವು ಇದೆ. ಹೀಗಾಗಿ ಜಲಾಶಯದಿಂದ 1 ಲಕ್ಷದ 31 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಯಬಿಡಲಾಗಿದೆ. ಪರಿಣಾಮ ವಿರುಪಾಪುರ ಗಡ್ಡಿ ಸಂಪರ್ಕ ಕಡಿತಗೊಂಡಿದೆ. ಇದೀಗ ವಿದೇಶಿಗರ ಮೋಜಿನ ತಾಣ ವಿರುಪಾಪುರ ಗಡ್ಡಿಯ ಗ್ರಾಮಸ್ಥರಿಗೆ ಯಾವುದೇ ಸಂಪರ್ಕ ಸಿಗುತ್ತಿಲ್ಲ. ವಿದೇಶಿಗರು ಸೇರಿದಂತೆ ಸಾಕಷ್ಟು ಜನ ಗ್ರಾಮದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.

ಇತ್ತ ಜಲಾಶಯದಿಂದ ನದಿಗೆ ನೀರು ಹರಿಯಬಿಟ್ಟ ಹಿನ್ನೆಲೆಯಲ್ಲಿ ಗಂಗಾವತಿ ಕಂಪ್ಲಿ ರಸ್ತೆ ಕೂಡ ಕಡಿತಗೊಂಡಿದೆ. ನೀರು ಸೇತುವೆ ಮೇಲೆ ಹರಿಯುತ್ತಿದೆ. ಶನಿವಾರ ರಾತ್ರಿಯಿಂದ ರಸ್ತೆ ಸಂಚಾರ ಬಂದ್ ಮಾಡಲಾಗಿದ್ದು, ಪ್ರಯಾಣಿಕರ ಪರದಾಡಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಕೈಗೊಳ್ಳಲಾಗಿತ್ತು.

ನದಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿರುವ ನವವೃಂದಾವನ ಗಡ್ಡೆಯಲ್ಲಿ ಕಾವಲುಗಾರರು ಸಿಲುಕಿಕೊಂಡಿದ್ದಾರೆ. ಉಡಚಪ್ಪ ಹಾಗೂ ರಾಘವೇಂದ್ರ ಸಿಲುಕಿಕೊಂಡವರಾಗಿದ್ದಾರೆ. ಇವರು ಇತ್ತೀಚೆಗೆ ವ್ಯಾಸರಾಜ ವೃಂದಾವನ ಧ್ವಂಸ ಮಾಡಿದಾಗಿನಿಂದ ನೇಮಕಗೊಂಡಿದ್ದರು. ಇವರಿಬ್ಬರು ಎಂದಿನಂತೆ ಶನಿವಾರ ರಾತ್ರಿ ನವವೃಂದಾವನ ಗಡ್ಡೆ ಕಾಯಲು ಹೋಗಿದ್ದರು. ಆದರೆ ಬೆಳಗಾಗುವುದರೊಳಗೆ ನದಿಗೆ ನೀರು ಬಂದಿದ್ದು, ನೀರಿನ ರಭಸದ ಹಿನ್ನೆಲೆಯಲ್ಲಿ ಮರಳಿ ಆನೆಗೊಂದಿಗೆ ಬರಲಾರದೆ ಪರದಾಡಿದ್ದಾರೆ. ನಂತರ ಅವರನ್ನು ಬೋಟ್ ಮೂಲಕ ಕಾವಲುಗಾರರನ್ನು ಕರೆತರುವ ಪ್ರಯತ್ನ ಮಾಡಲಾಯಿತು.

Comments

Leave a Reply

Your email address will not be published. Required fields are marked *