ಕುಂದಾನಗರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೇ ಮಾಯ

-ಬೆಳಗಾವಿಯಲ್ಲಿ ನಿಲ್ಲದ ಪ್ರವಾಹ

ಬೆಳಗಾವಿ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚರಿಸುವ ರಸ್ತೆಗಳು ಮೃತ್ಯುವಿಗೆ ಆಹ್ವಾನ ನೀಡುತ್ತಿವೆ. ಕಳೆದ 15 ದಿನಗಳಿಂದ ಸುರಿಯುತ್ತಿರುವ ಆಶ್ಲೇಷ ಮಳೆಯ ಹೊಡೆತಕ್ಕೆ ರಸ್ತೆಗಳ ಅವಷೇಶಗಳು ಮಾತ್ರ ಉಳಿದುಕೊಂಡಿವೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಂಚರಿಸುವಾಗ ರಸ್ತೆಗಳ ಸ್ಥಿತಿ ಗತಿ ಬಗ್ಗೆ ಮಾಹಿತಿ ಪಡೆಯದೆ ಮುಂದೆ ಸಾಗಬೇಡಿ. ಇದು ಪಬ್ಲಿಕ್ ಟಿವಿಯ ಕಳಕಳಿ.

ರಸ್ತೆ ಮೇಲೆ ನಿರಂತರವಾಗಿ ನೀರು ಹರಿಯುತ್ತಿರುವ ಪರಿಣಾಮ ರಸ್ತೆಗಳು ಯಮಸ್ವರೂಪಿಗಳಾಗಿವೆ. ಬೆಳಗಾವಿ ಜಿಲ್ಲಾ ಕೇಂದ್ರದಿಂದ ಗೋಕಾಕ್ ನಗರಕ್ಕೆ ತೆರಳುವ ಜಿಲ್ಲಾ ಮುಖ್ಯರಸ್ತೆ ಹಾಗೂ ಸಂಚರಿಸುವ ಪ್ರಮುಖ ರಸ್ತೆಗಳು ಭಾರೀ ಪ್ರಪಾತಗಳಾಗಿ ಮಾರ್ಪಟ್ಟಿವೆ.

ಬೆಳಗಾವಿ ಜಿಲ್ಲೆಯ ಬಹುತೇಕ ರಸ್ತೆಗಳ ಸ್ಥಿತಿ ಇದಕ್ಕಿಂತ ಭಯಾನಕವಾಗಿವೆ. ಗೋವಾ, ಮಹಾರಾಷ್ಟ್ರ, ಬಾಗಲಕೋಟೆ, ಧಾರವಾಡ, ಕಾರವಾರ ಜಿಲ್ಲೆಗಳಿಂದ ಬೆಳಗಾವಿಗೆ ಬರುವ ವಾಹನಗಳಿಗೆ ಅಪಾಯವಿದೆ. ಸಂಚಾರ ಮಾರ್ಗದ ಅರಿವಿಲ್ಲದೆ ಪ್ರಯಾಣಿಸಬೇಡಿ ಎಂದು ನಾವು ಮನವಿ ಮಾಡಿಕೊಳ್ಳುತ್ತೇವೆ.

ಅಪಾಯ ಎಂದು ಸೂಚನಾ ಫಲಕ ಹಾಕುವುದು ಒಂದೆಡೆಯಿರಲಿ, ಎಲ್ಲೆಲ್ಲಿ ಈ ತರಹ ರಸ್ತೆಗಳು ಕೊಚ್ಚಿ ಹೋಗಿವೆ ಎಂಬುದರ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಮಾಹಿತಿ ಪಡೆಯಲೂ ಮಳೆಯಾರ ಸಹಕರಿಸುತ್ತಿಲ್ಲ.

Comments

Leave a Reply

Your email address will not be published. Required fields are marked *