ದಿಢೀರ್ ಭೂಸ್ಪರ್ಶ – ಬಸ್ ತಳ್ಳಿದಂತೆ ಹೆಲಿಕಾಪ್ಟರ್ ತಳ್ಳಿದ ಸ್ಥಳೀಯರು

ಬಳ್ಳಾರಿ: ಇಂಧನ ಖಾಲಿಯಾಗಿ ತುರ್ತು ಲ್ಯಾಂಡಿಂಗ್ ಆದ ಹೆಲಿಕಾಪ್ಟರ್ ಅನ್ನು ಸ್ಥಳೀಯರು ಬಸ್ ತಳ್ಳಿದಂತೆ ತಳ್ಳಿರುವ ಘಟನೆ ಸಂಡೂರು ತಾಲೂಕಿನ ಎಸ್.ಆರ್. ಪುರದಲ್ಲಿ ನಡೆದಿದೆ.

ನೆರೆ ಸಂತ್ರಸ್ತರ ರಕ್ಷಣೆಗೆ ನೆರವಾಗಲೆಂದು ಬೆಂಗಳೂರಿನಿಂದ ಬೆಳಗಾವಿ ಕಡೆ ವಾಯುಸೇನೆಯ ಹೆಲಿಕಾಪ್ಟರ್ ಹೊರಟಿತ್ತು. ಮಾರ್ಗ ಮಧ್ಯೆ ಇಂಧನ ಕಡಿಮೆ ಇದೆ ಎನ್ನುವುದು ಪೈಲಟ್‍ಗೆ ಗೊತ್ತಾಗಿದೆ. ಕೂಡಲೇ ಪೈಲಟ್ ಸುರಕ್ಷಿತವಾಗಿ ಖಾಲಿ ಭೂಮಿಯಲ್ಲಿ ತುರ್ತು ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ್ದಾರೆ.

ಹೆಲಿಕಾಪ್ಟರ್ ಲ್ಯಾಂಡ್ ಆದ ವಿಚಾರ ತಿಳಿದು ಗ್ರಾಮಸ್ಥರು ತಂಡೋಪತಂಡವಾಗಿ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವಿಚಾರ ಗೊತ್ತಾಗಿ ಕುಡುತಿನಿ ಪಿಎಸ್‍ಐ ಮೊಹಮ್ಮದ್ ರಫಿ ನೇತೃತ್ವದಲ್ಲಿ ಪೊಲೀಸರು ಜಿಂದಾಲ್ ಫ್ಯಾಕ್ಟರಿಗೆ ತೆರಳಿ ವೈಮಾನಿಕ ಇಂಧನವನ್ನು ತಂದು ಹೆಲಿಕಾಪ್ಟರಿಗೆ ತುಂಬಿಸಿದ್ದಾರೆ.

ಇಂಧನ ತುಂಬಿಸಿದ್ದರೂ ಹೆಲಿಕಾಪ್ಟರ್ ಮಣ್ಣಿನಲ್ಲಿ ಸ್ವಲ್ಪ ಹೂತು ಹೋಗಿತ್ತು. ಹೀಗಾಗಿ ಗ್ರಾಮಸ್ಥರು ಹೆಲಿಕಾಪ್ಟರ್ ಅನ್ನು ಬಸ್ಸು ತಳ್ಳಿದಂತೆ ದೂಡಿದ್ದಾರೆ. ಬಳಿಕ ಹೆಲಿಕಾಪ್ಟರ್ ಬೆಳಗಾವಿ ಕಡೆ ಪ್ರಯಾಣ ಬೆಳೆಸಿತು. ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ಹೋಗುವ ಭರದಲ್ಲಿ ಸಿಬ್ಬಂದಿ ಇಂಧನ ಎಷ್ಟಿದೆ ಎನ್ನುವುದನ್ನು ಪರಿಶೀಲನೆ ಮಾಡದ ಪರಿಣಾಮ ಭೂ ಸ್ಪರ್ಶ ಮಾಡಿತ್ತು.

 

Comments

Leave a Reply

Your email address will not be published. Required fields are marked *