ನೋಡ ನೋಡುತ್ತಿದ್ದಂತೆ ಹೇಮಾವತಿಯಲ್ಲಿ ಕೊಚ್ಚಿ ಹೋದ ಯುವಕ

– ಹಾಸನದಲ್ಲಿ ಶಾಲಾ ಕಾಲೇಜುಗಳಿಗೆ ರಜೆ

ಚಿಕ್ಕಮಗಳೂರು/ಹಾಸನ: ನೋಡ ನೋಡುತ್ತಿದ್ದಂತೆ ಹೇಮಾವತಿ ನದಿಯಲ್ಲಿ ಯುವಕನೊಬ್ಬ ಕೊಚ್ಚಿ ಹೋದ ಘಟನೆ ಮೂಡಿಗೆರೆ ತಾಲೂಕಿನ ಆಲೂರಿನಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕು ಆಲೂರಿನ ಗ್ರಾಮದ ಶ್ರೀವತ್ಸ (22) ನದಿಯಲ್ಲಿ ಕೊಚ್ಚಿ ಹೋದ ಯುವಕ. ಜಮೀನಿಗೆ ಹೋಗಿದ್ದಾಗ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಶ್ರೀವತ್ಸ ಕಳೆದ ನಾಲ್ಕೈದು ದಿನಗಳಿಂದ ಗದ್ದೆಯನ್ನು ಹದ ಮಾಡುತ್ತಿದ್ದ. ಹೀಗಾಗಿ ಟ್ರ್ಯಾಕ್ಟರ್ ಮಾತ್ರ ಮನೆಗೆ ತಂದು, ಕಲ್ಟಿವೇಟರ್ ಅನ್ನು ಜಮೀನಿನಲ್ಲಿ ಬಿಟ್ಟು ಬಂದಿದ್ದ. ಆದರೆ ಭಾರೀ ಮಳೆಯಿಂದಾಗಿ ಹೇಮಾವತಿ ನದಿ ತುಂಬಿ ಹರಿಯುತ್ತಿದ್ದರಿಂದ ಕಲ್ಟಿವೇಟರ್ ನದಿಗೆ ಕೊಚ್ಚಿಕೊಂಡು ಹೋಯಿತಾ ಅಂತ ನೋಡಿಕೊಂಡು ಬರಲು ಶ್ರೀವತ್ಸ ಇಂದು ಜಮೀನಿಗೆ ಹೋಗಿದ್ದ. ಈ ವೇಳೆ ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ.

ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಹಾಸನ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದ್ದು, ಸಕಲೇಶಪುರ ತಾಲೂಕು, ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಗುರುವಾರ ರಜೆ ಘೋಷಿಸಿದ್ದಾರೆ.

ಚನ್ನರಾಯಪಟ್ಟಣ, ಅರಸೀಕೆರೆ ತಾಲೂಕು ಹೊರತುಪಡಿಸಿ ಉಳಿದ ಐದು ತಾಲೂಕಿನ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ ನೀಡಲಾಗಿತ್ತು. ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಕಲೇಶಪುರ ಹಾಗೂ ಅರೇಹಳ್ಳಿ ಹೋಬಳಿ ಶಾಲಾ-ಕಾಲೇಜಿಗೂ ನಾಳೆ ರಜೆ ನೀಡಲಾಗಿದೆ.

Comments

Leave a Reply

Your email address will not be published. Required fields are marked *