ಮೊಬೈಲ್‍ಗಾಗಿ ಅಪ್ರಾಪ್ತನಿಂದ ಯೂಟ್ಯೂಬ್ ಗಾಯಕನ ಕೊಲೆ

ಮುಂಬೈ: ಮೊಬೈಲ್‍ಗಾಗಿ ಅಪ್ರಾಪ್ತ ಬಾಲಕನೊಬ್ಬ ಯೂಟ್ಯೂಬ್ ಗಾಯಕನನ್ನು ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ತೇಜ್ ಕುಮಾರ್ ರಾಮ್ (22) ಕೊಲೆಯಾದ ಗಾಯಕ. ತೇಜ್ ಕುಮಾರ್ ಭೋಜ್‍ಪುರಿ ಗಾಯಕನಾಗಿದ್ದು, ಜೊತೆಗೆ ರೆಡ್ ಚಿಲ್ಲಿ ಹೋಟೆಲಿನ ಡೆಲಿವರಿ ಬಾಯ್ ಆಗಿ ಕೂಡ ಕೆಲಸ ಮಾಡುತ್ತಿದ್ದನು. ಮೊಬೈಲ್ ವಿಚಾರಕ್ಕಾಗಿ ಆತನನ್ನು ಕೊಲೆ ಮಾಡಲಾಗಿದ್ದು, ಸದ್ಯ ಆರೋಪಿಗಳಾದ ದರ್ಪನ್ ವಾಲೆಕರ್ ಹಾಗೂ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಬೆಳಗ್ಗೆ ತೇಜ್ ಕುಮಾರ್ ಫುಡ್ ಡೆಲಿವರಿ ನೀಡಲು ಠಾಗೂರ್ ನಗರಕ್ಕೆ ಹೋಗುತ್ತಿದ್ದನು. ಈ ವೇಳೆ ಇಬ್ಬರು ತೇಜ್ ಕುಮಾರ್ ನನ್ನು ನಿಲ್ಲಿಸಿ ಆತನ ಮೊಬೈಲ್ ಕೇಳಿದ್ದಾರೆ. ಆದರೆ ತೇಜ್ ಮೊಬೈಲ್ ಕೊಡಲು ನಿರಾಕರಿಸಿದ್ದಾನೆ. ಮೊಬೈಲ್ ಕೊಡಲು ನಿರಾಕರಿಸಿದ್ದಾಗ ಆರೋಪಿಗಳು ಆತನನ್ನು ಹೊಡೆದು ಬಳಿಕ ಚಾಕುವಿನಿಂದ ಇರಿದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಜೋಶಿ ತಿಳಿಸಿದ್ದಾರೆ.

ಈ ಘಟನೆ ನಂತರ ತೇಜ್ ಕುಮಾರ್ ನನ್ನು ಮಹಾತ್ಮ ಫುಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟರಲ್ಲೇ ತೇಜ್ ಮೃತಪಟ್ಟಿದ್ದನು. ಕಳ್ಳರು ಆತನಿಂದ ದರೋಡೆ ಮಾಡಲು ಯತ್ನಿಸಿದ್ದಾರೆ. ಸದ್ಯ ಇಬ್ಬರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಹೇಳಿದ್ದಾರೆ.

ತೇಜ್‍ಕುಮಾರ್ ರಾಮ್ ತಾನು ಹಾಡಿದ ಭೋಜ್‍ಪುರಿಯಲ್ಲಿ ಹಾಡನ್ನು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡುತ್ತಿದ್ದನು. ಅಲ್ಲದೆ ಯೂಟ್ಯೂಬ್‍ನಲ್ಲಿ ಆತನಿಗೆ ಸಾಕಷ್ಟು ಹಿಂಬಾಲಕರು ಕೂಡ ಇದ್ದಾರೆ.

Comments

Leave a Reply

Your email address will not be published. Required fields are marked *