ಹಾವು ಕಚ್ಚಿದ್ದಕ್ಕೆ ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ

ಲಕ್ನೋ: ಕುಡಿದ ನಶೆಯಲ್ಲಿದ್ದ ವ್ಯಕ್ತಿಯೋರ್ವ ಹಾವು ಕಚ್ಚಿದ್ದಕ್ಕೆ ಅದನ್ನು ಹಿಡಿದು ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಎತಾಹ್ ಜಿಲ್ಲೆಯ ಗ್ರಾಮವೊಂದರ ನಿವಾಸಿ ರಾಜ್ ಕುಮಾರ್ ಹಾವಿಗೆ ತಿರುಗಿ ಕಚ್ಚಿರುವ ವ್ಯಕ್ತಿಯಾಗಿದ್ದಾನೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಮನೆಗೆ ರಾಜ್ ಕುಡಿದು ಬಂದಿದ್ದನು. ಈ ವೇಳೆ ಮನೆಗೆ ನುಗ್ಗಿದ್ದ ಹಾವೊಂದು ಆತನಿಗೆ ಕಚ್ಚಿದೆ. ಆಗ ಕುಡಿದ ನಶೆಯಲ್ಲಿ ರಾಜ್ ಕೋಪಗೊಂಡು ಹಾವನ್ನು ಹಿಡಿದು ತಿರುಗಿ ಅದಕ್ಕೇ ಕಚ್ಚಿ, ತುಂಡು ತುಂಡಾಗಿಸಿದ್ದಾನೆ.

ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ರಾಜ್ ತಂದೆ ಬಾಬು ರಾಮ್ ಪ್ರತಿಕ್ರಿಯಿಸಿ, ಈ ಘಟನೆ ನಡೆದ ಸಂದರ್ಭದಲ್ಲಿ ನನ್ನ ಮಗ ಕುಡಿದಿದ್ದನು. ನಮ್ಮ ಮನೆಗೆ ನುಗ್ಗಿದ್ದ ಹಾವು ಆತನಿಗೆ ಕಚ್ಚಿತ್ತು. ಆಗ ರಾಜ್ ಹಾವನ್ನು ಹಿಡಿದು ಕಚ್ಚಿ ತುಂಡರಿಸಿದನು. ಸದ್ಯ ಆತನ ಪರಿಸ್ಥಿತಿ ಗಂಭೀರವಾಗಿದೆ. ಆತನ ಚಿಕಿತ್ಸೆ ಖರ್ಚನ್ನು ಕಟ್ಟುವಷ್ಟು ಶಕ್ತಿ ನಮಗಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

ಈ ಬಗ್ಗೆ ರಾಜ್ ಕುಮಾರ್‍ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾತನಾಡಿ, ರೋಗಿಯೊಬ್ಬ ನಮ್ಮ ಬಳಿ ಬಂದು ನಾನು ಹಾವನ್ನು ಕಚ್ಚಿದ್ದೇನೆ ಎಂದನು. ಆಗ ನಾವು ಹಾವು ಆತನಿಗೆ ಕಚ್ಚಿತ್ತು ಎಂದು ತಪ್ಪಾಗಿ ತಿಳಿದುಕೊಂಡಿದ್ದೆವು. ನಂತರ ನಿಜ ಸಂಗತಿ ತಿಳಿಯಿತು. ಆತನ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಆತನನ್ನು ಬೇರೆ ಆಸ್ಪತ್ರೆಗೆ ರವಾನಿಸಿ ಎಂದು ಕುಟುಂಬಸ್ಥರಿಗೆ ಸೂಚಿಸಿದ್ದೆವು ಎಂದರು.

ಘಟನೆ ನಡೆದ ಬಳಿಕ ರಾಜ್ ಕುಮಾರ್ ಕುಟುಂಬಸ್ಥರು ಸೇರಿ ಸಾವನ್ನಪ್ಪಿದ್ದ ಹಾವಿನ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *