ಅಸ್ಸಾಂಗಾಗಿ 51 ಲಕ್ಷ ರೂ. ದಾನ ಕೊಟ್ಟ ಬಿಗ್-ಬಿ

ಮುಂಬೈ: ಬಾಲಿವುಡ್ ನಟ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ಅಸ್ಸಾಂನ ಪ್ರವಾಹ ಸಂತ್ರಸ್ತರಿಗೆ 51 ಲಕ್ಷ ರೂ. ದಾನ ಮಾಡಿದ್ದಾರೆ.

ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್ ಅವರು ಟ್ವಿಟ್ಟರಿನಲ್ಲಿ, “ಮುಖ್ಯಮಂತ್ರಿ ಪರಿಹಾರ ನಿಧಿಗೆ 51 ಲಕ್ಷ ರೂ. ಕೊಡುಗೆ ನೀಡಿದ್ದಕ್ಕಾಗಿ ಅಮಿತಾಬ್ ಅವರನ್ನು ಪ್ರಶಂಸಿಸುತ್ತೇವೆ. ಜನರ ಪರ ನಿಮಗಿರುವ ಕಾಳಜಿ ಗೊತ್ತಾಗುತ್ತದೆ. ನಿಮ್ಮ ಬೆಂಬಲಕ್ಕೆ ಅಸ್ಸಾಂ ಜನತೆಯ ಪರವಾಗಿ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಅಮಿತಾಬ್ ಅವರು ಸಹ ತಮ್ಮ ಟ್ವಿಟ್ಟರಿನಲ್ಲಿ, “ಅಸ್ಸಾಂ ಸಂಕಷ್ಟದಲ್ಲಿದೆ. ಪ್ರವಾಹದಿಂದ ಅಸ್ಸಾಂನಲ್ಲಿ ದೊಡ್ಡ ಹಾನಿಯಾಗಿದೆ. ನಮ್ಮ ಸಹೋದರ ಹಾಗೂ ಸಹೋದರರಿಗೆ ಹಾರೈಸಿ ಹಾಗೂ ಅವರಿಗೆ ಸಹಾಯ ಮಾಡಿ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಹಾಯ ಧನ ನೀಡಿ. ನಾನು ನೀಡಿದ್ದೇನೆ. ನೀವು ನೀಡಿದ್ದೀರಾ?” ಎಂದು ಟ್ವೀಟ್ ಮಾಡಿದ್ದಾರೆ.

ಬಾಲಿವುಡ್ ನಟ, ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರು ಪ್ರವಾಹ ಪೀಡಿತ ಜನರಿಗೆ ಮತ್ತು ಕಾಜಿರಂಗ ಉದ್ಯಾನವನಕ್ಕೆ ತಲಾ 1 ಕೋಟಿ ರೂಪಾಯಿಯಂತೆ ಒಟ್ಟು 2 ಕೋಟಿ ರೂ. ಸಹಾಯ ಧನವನ್ನು ನೀಡಿದ್ದಾರೆ. ಅಲ್ಲದೆ ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಕೂಡ ಸಂತ್ರಸ್ಥರಿಗೆ ಸಹಾಯ ಹಸ್ತಚಾಚಿ ನೆರವಾಗಿ ಎಂದು ಮನವಿ ಮಾಡಿಕೊಂಡಿದ್ದರು.

ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಅಸ್ಸಾಂನ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ತಮ್ಮ ಒಂದು ತಿಂಗಳ ಸಂಬಳವನ್ನು ಅರ್ಧದಷ್ಟು ದಾನ ಮಾಡಿದ್ದಾರೆ. ಅಲ್ಲದೆ ನನ್ನ ಅಸ್ಸಾಂನನ್ನು ಸಹಾಯ ಮಾಡಲು ಮುಂದೆ ಬನ್ನಿ ಎಂದು ಟ್ವಿಟ್ಟರಿನಲ್ಲಿ ಮನವಿ ಮಾಡಿಕೊಂಡಿದ್ದರು. ಹಿಮಾ ಅವರು ತಮ್ಮ ಸಂಬಳದ ಅರ್ಧದಷ್ಟು ಹಣವನ್ನು ಭಾರತೀಯ ತೈಲ ನಿಗಮದ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಹಿಮಾ ಇಂಡಿಯನ್ ಆಯಿಲ್ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾರೆ.

Comments

Leave a Reply

Your email address will not be published. Required fields are marked *