73ನೇ ಹುಟ್ಟುಹಬ್ಬದಂದು 17 ಕೈದಿಗಳ ಜಾಮೀನು ಹಣ ಪಾವತಿಸಿದ ಉದ್ಯಮಿ

ಲಕ್ನೋ: ಉದ್ಯಮಿಯೊಬ್ಬರು ತಮ್ಮ 73ನೇ ಹುಟ್ಟುಹಬ್ಬಕ್ಕೆ 17 ಕೈದಿಗಳ ಜಾಮೀನು ಹಣ ಪಾವತಿಸಿದ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಮೋತಿಲಾಲ್ ಯಾದವ್ ಜಾಮೀನಿಗೆ ಹಣ ಪಾವತಿಸಿದ ಉದ್ಯಮಿ. ಮೋತಿಲಾಲ್ ಅವರು ಜಿಲ್ಲಾ ಜೈಲು ಅಧಿಕಾರಿಗಳಿಗೆ 32 ಸಾವಿರ ರೂ. ಪಾವತಿಸಿ ಸಣ್ಣ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ಹಾಗೂ ಜಾಮೀನು ಪಡೆಯಲು ಸಾಧ್ಯವಾಗದವರಿಗೆ ಬಿಡುಗಡೆ ಮಾಡಲು ಕೇಳಿಕೊಂಡಿದ್ದಾರೆ.

ಜಿಲ್ಲಾ ಜೈಲಿನ ಅಧೀಕ್ಷಕ ಶಶಿಕಾಂತ್ ಮಿಶ್ರಾ ಅವರು ಯಾದವ್ ಅವರ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅಲ್ಲದೆ ಕೈದಿಗಳ ಕುಟುಂಬ ಹಾಗೂ ಸ್ನೇಹಿತರು 8.5 ಲಕ್ಷ ರೂ. ಜಮೆ ಮಾಡಿದ ನಂತರ ಕಳೆದ ಎರಡು ವರ್ಷದಲ್ಲಿ ಸುಮಾರು 232 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಸ್ಥಳೀಯ ಉದ್ಯಮಿ ಮೋತಿಲಾಲ್ ಅವರು ಇಂದು ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಜಾಮೀನು ಪಡೆಯಲು ಸಾಧ್ಯವಾಗದ ಕೈದಿಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ ಎಂದು ಶಶಿಕಾಂತ್ ಮಿಶ್ರಾ ತಿಳಿಸಿದರು.

ಅಗಸ್ಟ್ 17, 2016ರಂದು ಬಂಧಿಸಿದ ಅಪರಾಧಿ ಜೈಲಿನಲ್ಲಿ ಇದ್ದರು. ಅಪರಾಧಿಯ ಜೈಲು ಶಿಕ್ಷೆಯ ಅವಧಿ ಕಳೆದ ವರ್ಷವೇ ಪೂರ್ಣಗೊಂಡಿದ್ದರೂ ದಂಡದ ಮೊತ್ತವಾದ 1,089 ರೂ. ಪಾವತಿಸಲು ಹಣ ಇರಲಿಲ್ಲ. ಹೀಗಾಗಿ ಅಪರಾಧಿ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿಯೇ ಇರಬೇಕಾಯಿತು ಎಂದು ಶಶಿಕಾಂತ್ ಮಿಶ್ರಾ ಹೇಳಿದರು.

ನನ್ನ ಮಗ ವಕೀಲನಾಗಿದ್ದು, ಜನರ ಸಹಾಯದಿಂದ ಕೈದಿಗಳನ್ನು ಬಿಡುಗಡೆ ಮಾಡಬಹುದು ಎಂಬ ವಿಷಯ ತಿಳಿಯಿತು. ಹೀಗಾಗಿ ನಾನು ನನ್ನ ಕೊಡುಗೆಯನ್ನು ನೀಡಿದ್ದೇನೆ. ಮುಂದೆ ಅವರು ಈ ಅಪರಾಧಗಳನ್ನು ಮುಂದುವರಿಸಲ್ಲ ಎನ್ನುವ ಭಾವನೆ ಹೊಂದಿದ್ದೇನೆ ಎಂದು ಮೋತಿಲಾಲ್ ಯಾದವ್ ತಿಳಿಸಿದರು.

Comments

Leave a Reply

Your email address will not be published. Required fields are marked *