ಗಾಲಿ ಸ್ಫೋಟಗೊಂಡು ಡಿವೈಡರ್ ಹಾರಿದ ಕಾರಿಗೆ ಲಾರಿ ಡಿಕ್ಕಿ- ನಾಲ್ವರ ದೇಹ ಛಿದ್ರ ಛಿದ್ರ

ಚಿತ್ರದುರ್ಗ: ನಗರದ ಹೊರವಲಯದಲ್ಲಿ ಭಾರೀ ದುರ್ಘಟನೆ ನಡೆದಿದ್ದು, ಚಾಲಕ ಸೇರಿದಂತೆ ನಾಲ್ವರು ಘಟನಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ನಿವಾಸಿಗಳಾದ ಇನ್ನೋವಾ ಕಾರು ಚಾಲಕ ಅಶೋಕ (34), ಪತ್ನಿ ಪ್ರವಿತಾ (33), ಮಂಜುಳಾ (42) ಹಾಗೂ ಓರ್ವ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಶ್ಯಾಮಲಾ (43) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಶೋಭಾ (53) ಹಾಗೂ ಸುಕನ್ಯಾ (53) ಅವರಲ್ಲಿ ಮೃತಪಟ್ಟವರು ಯಾರು, ಆಸ್ಪತ್ರೆಗೆ ದಾಖಲಾಗಿದ್ದು ಯಾರು ಎನ್ನುವುದು ಸ್ಪಷ್ಟವಾಗಿಲ್ಲ.

ಆಗಿದ್ದೇನು?:
ಅಶೋಕ ಪತ್ನಿ ಪ್ರವಿತಾ ಸೇರಿದಂತೆ ಒಟ್ಟು 6 ಜನರು ಇನ್ನೋವಾ ಕಾರಿನಲ್ಲಿ ಬೆಂಗಳೂರಿನಿಂದ ಬದಾಮಿಯ ಬನಶಂಕರಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಚಿತ್ರದುರ್ಗ ನಗರದ ಹೊರವಲಯದಲ್ಲಿ ಕಾರಿನ ಮುಂದಿನ ಗಾಲಿ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮ ಕಾರು ಡಿವೈಡರ್ ಹಾರಿ ಎದುರಿನ ರಸ್ತೆಗೆ ಬಿದ್ದಿದೆ. ಇದೇ ವೇಳೆ ಚಿತ್ರದುರ್ಗದಿಂದ ಹಿರೀಯೂರು ಕಡೆಗೆ ಹೋಗುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

ಗಾರಿ ಸ್ಫೋಟಗೊಂಡು ಹಾರಿ ನೆಲಕ್ಕೆ ಬಿದ್ದಿದ್ದರಿಂದ ಹಾಗೂ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಕಾರು ಸಂಪೂರ್ಣವಾಗಿ ರಕ್ತದ ಮಡುವಿನಲ್ಲಿ ಮುಳುಗಿತ್ತು. ಮೃತ ಪೈಕಿ ಓರ್ವ ಮಹಿಳೆ ಕಾರಿನಿಂದ ಹಾರಿ ನಡು ರಸ್ತೆಯ ಮೇಲೆ ಬಿದ್ದಿದ್ದರು.

ಅಪಘಾತವನ್ನು ನೋಡಿದ ಸವಾರರು ಹಾಗೂ ಸ್ಥಳೀಯರು ತಕ್ಷಣವೇ ರಕ್ಷಣೆಗೆ ಮುಂದಾಗಿದ್ದಾರೆ. ತಕ್ಷಣವೇ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತರ ದೇಹಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಚಿತ್ರದುರ್ಗದ ಬಡಾವಣೆ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಲಾರಿ ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *