ಪ್ರವಾಹಕ್ಕೆ ನಲುಗಿದ ಬಿಹಾರ- 13 ಸಾವು, ಸಂಕಷ್ಟದಲ್ಲಿ 18 ಲಕ್ಷ ಮಂದಿ

ಪಾಟ್ನಾ: ಬಿಹಾರದಲ್ಲಿ ಭಾರೀ ಮಳೆಗೆ ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು ರಾಜ್ಯದ 9 ಜಿಲ್ಲೆಗಳು ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಈವರೆಗೆ 13 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಸುಮಾರು 18 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಅರೇರಿಯಾ, ಕಿಶನ್‍ಗಂಜ್, ಶಿಯೋಹರ್, ಸೀತಮಾರ್ಹಿ, ಪೂರ್ವ ಚಂಪಾರನ್, ಸುಪಾಲ್, ಮಧುಬನಿ, ದರ್ಭಂಗಾ ಮತ್ತು ಮುಜಾಫರ್‍ಪುರ ಜಿಲ್ಲೆಗಳು ಪ್ರವಾಹಕ್ಕೆ ಅತಿ ಹೆಚ್ಚು ಹಾನಿಗೊಳಗಾಗಿದ್ದು, ಈ ಜಿಲ್ಲೆಗಳ ಸುಮಾರು 18 ಲಕ್ಷ ಮಂದಿ ಪರದಾಡುತ್ತಿದ್ದಾರೆ. ಈವರೆಗೆ ಪ್ರವಾಹಕ್ಕೆ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಕಾಣೆಯಾಗಿದ್ದಾರೆ.

ವರದಿಯಾಗಿರುವ ಮೃತರಲ್ಲಿ 9 ಮಂದಿ ಅರೇರಿಯಾ ಜಿಲ್ಲೆಯ ನಿವಾಸಿಗಳು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಬೈದ್ಯನಾಥ ಯಾದವ್ ತಿಳಿಸಿದ್ದಾರೆ. ಜೊತೆಗೆ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರವನ್ನೂ ಕೂಡ ಘೋಷಿಸಲಾಗಿದೆ.

ಸೀತಾಮರ್ಹಿ ಜಿಲ್ಲಾಡಳಿತ ಅಧಿಕಾರಿಗಳ ಪ್ರಕಾರ, ಪ್ರವಾಹಕ್ಕೆ ಜಿಲ್ಲೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ, ನಾಲ್ವರು ನಾಪತ್ತೆಯಾಗಿದ್ದಾರೆ. ಆದರೆ ಪರಿಸ್ಥಿತಿಯನ್ನು ನಿಭಾಯಿಸಲು ಆಡಳಿತವು ಸರಿಯಾದ ಕ್ರಮ ಕೈಗೊಂಡಿಲ್ಲ. ಸಹಾಯವಾಣಿಗಾಗಿ ಸ್ಥಾಪಿಸಲಾದ ದೂರವಾಣಿ ಮಾರ್ಗವೂ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಅರೇರಿಯಾದಲ್ಲಿ ಸ್ಥಾಪಿಸಲಾದ ನಿಯಂತ್ರಣ ಕೊಠಡಿಯಲ್ಲಿ ಅಧಿಕಾರಿಗಳು ವಿಪತ್ತು ನಿರ್ವಹಣೆಯನ್ನು ಹೊರತುಪಡಿಸಿ ಇತರೆ ಕೆಲಸಗಳನ್ನು ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.

ಸಾಮಾನ್ಯ ಜನರು ಕಂಟ್ರೋಲ್ ರೂಮ್‍ಗೆ ಕರೆ ಮಾಡಬೇಕಾದರೆ ಮೊದಲು ಸ್ಥಳೀಯ ಮುಖಂಡರನ್ನು ಅವರು ಸಂಪರ್ಕಿಸಬೇಕು. ಆ ನಂತರ ಕಟ್ರೋಲ್ ರೂಮ್‍ಗೆ ಕರೆ ಕನೆಕ್ಟ್ ಮಾಡಲಾಗುತ್ತದೆ. ಹೀಗಾಗಿ ಅಧಿಕಾರಿಯೊಬ್ಬರು ತಮ್ಮ ವೈಯಕ್ತಿಕ ಫೋನ್ ನಂಬರ್ ಕೆಲವು ಸ್ಥಳೀಯ ಪಂಚಾಯತ್ ಪ್ರತಿನಿಧಿಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರವಾಹದಿಂದ ತತ್ತರಿಸಿರುವ ಬಿಹಾರದ ಕುರಿತು ಸಿಎಂ ನಿತೀಶ್ ಕುಮಾರ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ ಸಿಎಂ ಅವರ ಈ ನಡೆಗೆ ವಿರೋಧ ಪಕ್ಷದ ಕೆಲ ನಾಯಕರು ವಿರೋಧಿಸಿದ್ದು, ರಾಷ್ಟ್ರೀಯ ಲೋಕ ಸಮತ ಪಕ್ಷದ ನಾಯಕ ಉಪೇಂದ್ರ ಖುಷ್ವಾಹ ಅವರು ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.

ಈ ರೀತಿ ಪ್ರತಿ ವರ್ಷ ರಾಜ್ಯದಲ್ಲಿ ಪ್ರವಾಹ ಉಂಟಾದಾಗ ವೈಮಾನಿಕ ಸಮೀಕ್ಷೆ ನಡೆಸಿ ಸಿಎಂ ವ್ಯರ್ಥ ಮಾಡುತ್ತಿದ್ದಾರೆ. ಇದರ ಬದಲು ಪ್ರವಾಹದ ಕುರಿತು ಕ್ರಮ ಕೈಗೊಂಡು, ಜನರನ್ನು ಪ್ರವಾಹದ ಸಂಕಷ್ಟದಿಂದ ದೂರ ಮಾಡುವ ಕೆಲಸ ಮಾಡಬೇಕು. ಸರ್ಕಾರ ಪ್ರವಾಹ ಬಂದಾಗ ಜನರು ಎದುರಿಸುವ ಸಮಸ್ಯೆಗೆ ಪರಿಹಾರ ಬಿಡುಗಡೆ ಮಾಡುವಲ್ಲಿ ಸೋತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *