ಬಹುಮತ ಕಳೆದುಕೊಂಡ ಸರ್ಕಾರದ ಮಂತ್ರಿಯಿಂದ ಅಕ್ರಮವಾಗಿದೆ – ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಬಹುಮತ ಕಳೆದುಕೊಂಡ ಸರ್ಕಾರದ ಮಂತ್ರಿಯಿಂದ ಅಕ್ರಮವಾಗಿದೆ. ಯಾವುದೇ ನೆಪಗಳನ್ನು ಹೇಳದೆ ಸಿಎಂ ತಕ್ಷಣ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ವ್ಯಾಪ್ತಿಯನ್ನು ಸ್ಪೀಕರ್ ಪ್ರಶ್ನೆ ಮಾಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸಮತ ಸಾಬೀತು ಮಾಡುವ ಸಂದರ್ಭದಲ್ಲಿ ವಿಪಕ್ಷವಾಗಿ ಅವರು ನಡುರಾತ್ರಿ ಕೋರ್ಟ್ ಮೆಟ್ಟಿಲೇರಿದರು. ಅಂದು 48 ಗಂಟೆಯಲ್ಲಿ ಸಾಬೀತು ಮಾಡುವ ನಿರ್ದೇಶನ ಪಡೆದಿದರು. ಅಂದು ನೀವು ಸುಪ್ರೀಂ ಆದೇಶ ಪಾಲನೆ ಮಾಡಿಲ್ವಾ? ಈಗ ಏಕೆ ಸುಪ್ರೀಂ ಮದ್ಯ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತೀರಾ ಎಂದು ಪ್ರಶ್ನಿಸಿದರು.

ಸರ್ಕಾರ ಶಾಸಕರ ಮೇಲೆ ಎಸಿಬಿ ಪ್ರಯೋಗ ಮಾಡಿ ಒತ್ತಡ ಹಾಕಲು ಪ್ರಯತ್ನ ಮಾಡುತ್ತಿದೆ. ಎಸಿಬಿ ಮುಖ್ಯಸ್ಥನಾಗಿ ನಿಂಬಾಳ್ಕರ್ ಇದ್ದಾರೆ, ಅವರನ್ನು ಬಳಸಿ ರಾಜೀನಾಮೆ ಕೊಟ್ಟ ಶಾಸಕರನ್ನು ಬಗ್ಗುಬಡಿಯಲು ಎಸಿಬಿ ಬಳಸುವ ಆತಂಕ ಇದೆ. ರಾಜ್ಯದಲ್ಲಿ ಉಂಡು ಹೋದ ಕೊಂಡೂ ಹೋದ ಸರ್ಕಾರ ಇದೆ. ರೇವಣ್ಣ ಹಸ್ತಕ್ಷೇಪ ಮಾಡಿ ಸಾವಿರಾರು ಕೋಟಿ ದಂಧೆ ಮಾಡಿದ್ದಾರೆ. ಸ್ವತಃ ಶಾಸಕ ಮುನಿರತ್ನ ಅವರೇ ಆರೋಪಿಸುತ್ತಿದ್ದಾರೆ.

ಲೋಕೋಪಯೋಗಿ ಮಂತ್ರಿ 800 ಎಂಜಿನಿಯರ್‍ ಗಳ ವರ್ಗಾವಣೆ ಮಾಡಿದ್ದಾರೆ. ಬಹುಮತ ಕಳೆದುಕೊಂಡ ಸರ್ಕಾರದ ಮಂತ್ರಿಯಿಂದ ಅಕ್ರಮವಾಗಿದೆ. ರೇವಣ್ಣ ನೂರಾರು ಕೋಟಿ ಕಮಿಷನ್ ಹೊಡೆದ ಸಂಶಯ ಇದೆ. ಪೊಲೀಸ್ ಇಲಾಖೆಯ ವರ್ಗಾವಣೆ ತಡೆಹಿಡಿಯಲಾಗಿದೆ. ಎಂಜಿನಿಯರ್‍ ಗಳ ವರ್ಗಾವಣೆಯನ್ನೂ ತಕ್ಷಣ ತಡೆಹಿಡಿಬೇಕು. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್‍ ಗೆ ಕೋಟ ಒತ್ತಾಯ ಮಾಡಿದ್ದಾರೆ. ಡಿಕೆಶಿ ಎಷ್ಟೇ ಒತ್ತಡ ತಂದರೂ ಎಂಟಿಬಿ ಬದಲಾಗಲ್ಲ ಅನ್ನೋ ವಿಶ್ವಾಸ ಇದೆ ಎಂದು ಶ್ರೀನಿವಾಸ್ ಪೂಜಾರಿ ಹೇಳಿದರು.

ಸಾ.ರಾ ಮಹೇಶ್ ಮತ್ತು ಈಶ್ವರಪ್ಪ ಭೇಟಿ ಕೇವಲ ಆಕಸ್ಮಿಕ. ನಾವು ರಾತ್ರಿ ಕಂಡ ಬಾವಿಗೆ ಹಗಲು ಹೋಗಿ ಬೀಳ್ತೀವಾ. ಸಿದ್ದರಾಮಯ್ಯಗೆ ವಿರೋಧ ಪಕ್ಷ ನಾಯಕನಾಗೋದೇ ಉತ್ತಮ ಅಂತನಿಸಿದೆ. ಕಾಂಗ್ರೆಸ್ ಉಳಿಯಲು ಜೆಡಿಎಸ್‍ಗೆ ನೀಡಿದ ಬೆಂಬಲ ವಾಪಸ್ ಪಡೆಯಲೇಬೇಕು. ಬುಧವಾರ ವಿಶ್ವಾಸಮತ ಸಾಬೀತು ಮಾಡೋದು ಅಸಾಧ್ಯ. ರಾಜ್ಯ ಸರ್ಕಾರ ಬೀಳುವುದು ಖಚಿತ ಎಂದು ಭವಿಷ್ಯ ನುಡಿದರು.

Comments

Leave a Reply

Your email address will not be published. Required fields are marked *