ಅನರ್ಹಗೊಂಡ್ರೂ ಪರವಾಗಿಲ್ಲ ಸರ್ಕಾರ ಉಳಿಯಬಾರದು – ಜಾರಕಿಹೊಳಿ ಶಪಥ

ಮುಂಬೈ: ಶಾಸಕ ಸ್ಥಾನದಿಂದ ಅನರ್ಹಗೊಂಡರೂ ಪರವಾಗಿಲ್ಲ. ಆದರೆ ಸಮ್ಮಿಶ್ರ ಸರ್ಕಾರ ಮಾತ್ರ ಉಳಿಯಬಾರದು. ನಮ್ಮ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯಲ್ಲ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಬಂದಿದ್ದಾರೆ ಎನ್ನಲಾಗಿದೆ.

ಮುಂಬೈ ಹೋಟೆಲ್‍ನಲ್ಲಿ ತಂಗಿರುವ ರಮೇಶ್ ಜಾರಕಿಹೊಳಿ ಅವರು ತಮ್ಮ ಅಪ್ತರ ಬಳಿ ಈ ಕುರಿತು ಮಾತನಾಡಿದ್ದು, ಶಾಸಕ ಸ್ಥಾನದಿಂದ ಅನರ್ಹವಾದರೂ ಪರವಾಗಿಲ್ಲ. ಸರ್ಕಾರ ಪತನ ಆಗುವುದು ಖಚಿತ. ಒಂದೊಮ್ಮೆ ನಾನು ಅನರ್ಹಗೊಂಡರೆ ನನ್ನ ಕುಟುಂಬದಿಂದ ಒಬ್ಬರನ್ನು ಚುನಾವಣೆಗೆ ಸ್ಪರ್ಧೆ ಮಾಡುವಂತೆ ಮಾಡಿ, ಸಚಿವರನ್ನಾಗಿ ಮಾಡುತ್ತೇನೆ ಎಂದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಸುಪ್ರೀಂ ಕೋರ್ಟ್ ನಿರ್ಧಾರ ಸ್ವಾಗತ ಮಾಡಿರುವ ಅವರು ರಾಜೀನಾಮೆಯಿಂದ ಹಿಂದೆ ಸರಿಯಲ್ಲ ಎಂದು ದೃಢಪಡಿಸಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಆದರೆ ಅತೃಪ್ತ ಶಾಸಕರು ರಾಜೀನಾಮೆ ಹಿಂಪಡೆಯಿರುವ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಅಲ್ಲದೇ ಮಂಗಳಾರದವರೆಗೂ ಮುಂಬೈನಲ್ಲೇ ಉಳಿಯಲು ತೀರ್ಮಾನ ಮಾಡಿದ್ದಾರೆ.

ಶಾಸಕ ಸ್ಥಾನದಿಂದ ಅನರ್ಹಗೊಂಡರೆ ರಮೇಶ್ ಜರಕಿಹೊಳಿ ಪರವಾಗಿ ಪತ್ನಿ ಜಯಶ್ರೀ, ಅಳಿಯ ಅಂಬಿರಾವ್ ಪಾಟೀಲ್ ಅಥವಾ ಆಪ್ತ ಕೊತ್ವಾಲ್ ಅವರನ್ನು ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಇವರನ್ನೇ ಮಂತ್ರಿ ಮಾಡುವ ಕುರಿತು ನಿರೀಕ್ಷೆಯಲ್ಲಿ ಜಾರಕಿಹೊಳಿ ಅವರು ಇದ್ದಾರೆ. ಉಳಿದಂತೆ ಮಹೇಶ್ ಕುಮಟಳ್ಳಿ ಪರವಾಗಿ ಅವರ ಮಗ ಅಥವಾ ಪತ್ನಿ ಚುನಾವಣೆಗೆ ಸ್ಪರ್ಧೆ ನಡೆಸಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *