ಮೈತ್ರಿ ನಾಯಕರ ಬಿಜೆಪಿ ಸೇರ್ಪಡೆಗೆ ಪಕ್ಷದಲ್ಲೇ ವಿರೋಧ- ಬಿಎಸ್‍ವೈಗೆ ಹೊಸ ತಲೆನೋವು

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಕೆಲ ನಾಯಕರ ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತವಾಗುತ್ತಿದ್ದು, ಮಹಾಲಕ್ಷ್ಮೀ ಲೇಔಟ್ ಶಾಸಕ ಕೆ.ಗೋಪಾಲಯ್ಯ ಸೇರಿದಂತೆ ವಿವಿಧ ನಾಯಕರ ಸೇರ್ಪಡೆಗೆ ಬಿಜೆಪಿ ಪಾಳಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಾಜಿ ಉಪಮೇಯರ್ ಎಸ್.ಹರೀಶ್ ನೇತೃತ್ವದಲ್ಲಿ ನಿಯೋಗ ಇಂದು ಡಾಲರ್ಸ್ ಕಾಲೋನಿಯಲ್ಲಿರುವ ಬಿ.ಎಸ್.ಯಡಿಯೂರಪ್ಪ ನಿವಾಸದ ಬಳಿ ಆಗಮಿಸಿ, ಈ ಕುರಿತು ತಮ್ಮ ಮನವಿ ಸಲ್ಲಿಸಿದ್ದು, ಈವೆರೆಗೆ ಕಾರ್ಯಕರ್ತರು ಗೋಪಾಲಯ್ಯನವರ ವಿರುದ್ಧ ಕೆಲಸ ಮಾಡಿದ್ದಾರೆ. ಇದೀಗ ಅವರ ಪರವಾಗಿ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ವೇಳೆ ಬಿ.ಎಸ್.ಯಡಿಯೂರಪ್ಪ ಅವರು ಮನವಿ ಸ್ವೀಕರಿಸಿ, ಅದನ್ನೆಲ್ಲ ಹೊರಗೆ ಮಾತನಾಡಬೇಡಿ, ನಂತರ ಕುಳಿತು ಚರ್ಚೆ ಮಾಡೋಣ ಎಂದು ಕಾರ್ಯಕರ್ತರ ಮನವೊಲಿಸಿ ಕಳುಹಿಸಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರಿಗೆ ಹೊಸ ತಲೆನೋವು ಪ್ರಾರಂಭವಾದಂತಾಗಿದ್ದು, ಶಾಸಕರ ಸೇರ್ಪಡೆಗೆ ಪಕ್ಷದೊಳಗಿನ ವಿರೋಧ ಶಮನ ಮಾಡುವುದು ಹೇಗೆ ಎಂಬ ಸಂಕಷ್ಟ ಶುರುವಾಗಿದೆ.

ಜೆಡಿಎಸ್ ಅತೃಪ್ತ ಶಾಸಕ ಕೆ.ಗೋಪಾಲಯ್ಯ ರಾಜೀನಾಮೆ ನೀಡಿ ಮುಂಬೈ ಹೋಟೆಲ್ ಸೇರಿದ್ದು, ರಾಜೀನಾಮೆ ಅಂಗೀಕಾರವಾದ ಬಳಿಕ ಗೋಪಾಲಯ್ಯ ಬಿಜೆಪಿ ಸೇರ್ಪಡೆಯಾಗುವ ಹಿನ್ನೆಲೆ ಮಹಾಲಕ್ಷ್ಮೀ ಲೇಔಟ್‍ನ ಕಮಲ ಮುಖಂಡರು ಆರಂಭದಲ್ಲೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇದರಿಂದ ಇತ್ತ ಗೋಪಾಲಯ್ಯನವರಿಗೂ ಸಂಕಷ್ಟ ಎದುರಾದಂತಾಗಿದ್ದು, ಗೋಪಾಲಯ್ಯ ಸೇರ್ಪಡೆಗೆ ಬಿಜೆಪಿಯಲ್ಲಿ ವಿರೋಧ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ನಂದೀಶ್ ರೆಡ್ಡಿ ನೇತೃತ್ವದ ನಿಯೋಗ ಬೈರತಿ ಬಸವರಾಜ್ ಬಿಜೆಪಿ ಸೇರ್ಪಡೆಗೆ ವಿರೋಧಿಸಿತ್ತು. ಶಾಸಕಾಂಗ ಪಕ್ಷದ ಸಭೆಯಲ್ಲಿ ತುಳಸಿ ಮುನಿರಾಜು, ಮುನಿರತ್ನ ಸೇರ್ಪಡೆಗೆ ವಿರೋಧಿಸಿದ್ದರು. ಹೀಗಾಗಿ ಬಿಜೆಪಿ ಸೇರುವ ಹೊಸ್ತಿಲಲ್ಲಿ ನಿಂತಿರುವ ಬೆಂಗಳೂರು ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಸಂಕಷ್ಟ ಎದುರಾಗಿದೆ.

Comments

Leave a Reply

Your email address will not be published. Required fields are marked *