Exclusive: ವಿಮಾನ ನಿಲ್ದಾಣದಲ್ಲಿ ಡಿಕೆಶಿ, ಬಿಎಸ್‍ವೈ ಆಪ್ತ ಸಂತೋಷ್ ನಡುವೆ ಕಿತ್ತಾಟ

– ಮಾಧ್ಯಮದವರನ್ನ ಕಂಡು ಓಡೋಡಿ ಹೋದ ಸಂತೋಷ್
– ನೀನು ಎಳಸು, ಬಚ್ಚಾ ಎಂದ ಡಿಕೆಶಿ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಕೆ ಶಿವಕುಮಾರ್ ಮತ್ತು ಬಿಎಸ್‍ವೈ ಆಪ್ತ ಸಂತೋಷ್ ನಡುವೆ ಕಿತ್ತಾಟ ನಡೆದಿದೆ.

ಪಕ್ಷೇತರ ಶಾಸಕ ಆರ್.ಶಂಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹಾರಲು ಪ್ರಯತ್ನಿಸಿದ್ದರು. ಆರ್.ಶಂಕರ್ ಬೆನ್ನತ್ತಿದ್ದ ಸಚಿವ ಡಿ.ಕೆ.ಶಿವಕುಮಾರ್ ವಿಮಾನ ನಿಲ್ದಾಣ ಪ್ರವೇಶಿಸಿದ್ದರು. ಆರ್.ಶಂಕರ್ ಅವರನ್ನು ವಿಮಾನ ನಿಲ್ದಾಣದಲ್ಲಿದ್ದ ಬಿ.ಎಸ್.ಯಡಿಯೂರಪ್ಪ ಆಪ್ತ ಸಂತೋಷ್ ಮುಂಬೈಗೆ ಕಳುಹಿಸಲು ಸಿದ್ಧಗೊಂಡಿದ್ದರು.

ಈ ವೇಳೆ ಡಿ.ಕೆ.ಶಿವಕುಮಾರ್ ಮತ್ತು ಸಂತೋಷ್ ಮುಖಾಮುಖಿಯಾಗಿದ್ದಾರೆ. ನಿಲ್ದಾಣದ ಒಳಗಡೆ ಅಲ್ಲಿದ್ದ ಸಾರ್ವಜನಿಕರ ಮುಂದೆಯೇ ಶಿವಕುಮಾರ್ ಮತ್ತು ಸಂತೋಷ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ನೀನು ಇನ್ನೂ ಬಚ್ಚಾ, ಎಳಸು ಎಂದು ಡಿ.ಕೆ.ಶಿವಕುಮಾರ್ ಅವಾಜ್ ಹಾಕಿದಾಗ ವಿಮಾನ ನಿಲ್ದಾಣದಿಂದ ಹೊರ ಬಂದ ಸಂತೋಷ್, ಮಾಧ್ಯಮಗಳನ್ನು ಕಂಡ ಕೂಡಲೇ ಓಡೋಡಿ ಹೋಗಿ ಕಾರು ಹತ್ತಿಕೊಂಡಿದ್ದಾರೆ. ಶಿವಕುಮಾರ್ ಅವರ ಪ್ರವೇಶಿಸುವ ಅಷ್ಟರಲ್ಲಿಯೇ ಆರ್.ಶಂಕರ್ ಅವರನ್ನು ಮುಂಬೈನತ್ತ ಕಳುಹಿಸುವಲ್ಲಿ ಸಂತೋಷ್ ಯಶಸ್ವಿಯಾಗಿದ್ದಾರೆ.

ಇಂದು ಬೆಳಗ್ಗೆಯೂ ನಾಗೇಶ್ ಅವರಿಗಾಗಿ ವಿಶೇಷ ವಿಮಾನ ಸಿದ್ಧಪಡಿಸಿಕೊಂಡು ಯಡಿಯೂರಪ್ಪ ಆಪ್ತ ಸಂತೋಷ್ ನಿಂತಿದ್ದರು. ಪರಮೇಶ್ವರ್ ಬೆಂಬಲಿಗರು ನಾಗೇಶ್ ಅವರನ್ನು ಕರೆದುಕೊಂಡು ಹೋಗಲು ಮುಂದಾಗುತ್ತಿದ್ದ ವೇಳೆ ಯಡಿಯೂರಪ್ಪ ಬೆಂಬಲಿಗರು ಅಡ್ಡಿಪಡಿಸಿದ್ದರು. ಈ ವೇಳೆ ಇಬ್ಬರು ನಾಯಕರ ಆಪ್ತರ ನಡುವೆ ಗಲಾಟೆ ನಡೆದಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಹೆಚ್‍ಎಎಲ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಪೊಲೀಸರು ಆಗಮಿಸುತ್ತಿದ್ದಂತೆ ಹೆಚ್.ನಾಗೇಶ್ ವಿಶೇಷ ವಿಮಾನದಲ್ಲಿ ಮುಂಬೈನತ್ತ ಹಾರಿದ್ದರು.

Comments

Leave a Reply

Your email address will not be published. Required fields are marked *